Thursday, April 13, 2023

ಸಮಸ್ಯೆಗಳನ್ನ ಮೆಟ್ಟಿ ನಿಂತು ವಿಜಯ ಸಾಧಿಸಿದ ಮಹಾರಾಷ್ಟ್ರದ ಭಿವಂಡಿಯ ಪದ್ಮಶಾಲಿಗಳು

"ಕ್ವಿಟ್ ಭಿವಂಡಿ, ನಮ್ಮ ಭಿವಂಡಿಯನ್ನ ಬಿಟ್ಟು ತೊಲಗಿ" ಎಂದು ಪದ್ಮಾಶಾಲಿಗಳನ್ನ ಹೊರಹಾಕುವ ಹಿಂಸಾತ್ಮಕ
ಅಭಿಯಾನವನ್ನ ಆದಿನಗಳಲ್ಲಿ ಅಲ್ಲಿನ ಸ್ಥಳೀಯರು ನಡೆಸಿದ್ದರು. ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಮನೆ ಬಿಟ್ಟು
ಹೊರಬರದ ಪರಿಸ್ಥಿತಿ ಪದ್ಮಶಾಲಿಗರಿಗೆ ಎದುರಾಗಿತ್ತು. ಪದ್ಮಶಾಲಿ ಹೆಣ್ಣುಮಕ್ಕಳಿಗೆ ಬೀದಿಗಳಲ್ಲಿ ಕಿರುಕುಳ ನೀಡಿದ್ದರು.
ಶಾಲೆಗಳಿಂದ ಹೊರ ಬರುತಿದ್ದ ಮಕ್ಕಳು ಎಂದು ನೋಡದೆ ಕಲ್ಲಿನಿಂದ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದ್ದರು. ಇದು
ಸುಮಾರು 1965ರ ಸಮಯದಲ್ಲಿ ನಡೆದಿದ್ದ ಘಟನೆ.


ಅದಾದ ನಂತರ ಭಿವಂಡಿಯಲ್ಲಿ, 1970ರಲ್ಲಿ ದೊಡ್ಡದಾದ ಕೋಮುಗಲಭೆ ನಡೆದಿತ್ತು. ಸಾವಿರಾರು ಜನರ
ಮಾರಣಹೋಮ ಅಂದು ನಡೆದಿತ್ತು. ಮನೆಗಳು, ಅಂಗಡಿಗಳು ಮಗ್ಗಗಳು, ಕಚ್ಚಾ ವಸ್ತುಗಳು, ಸಿದ್ದಪಡಿಸಿದ ಜವಳಿ
ಉತ್ಪನ್ನಗಳು ಕೋಮು ದಳ್ಳುರಿಗೆ ಭಸ್ಮವಾಗಿದ್ದವು. ಊಹಿಸದೇ ಇದ್ದ ಅನಾಹುತಕ್ಕೆ ಬಹಳಷ್ಟು ಪದ್ಮಶಾಲಿಗಳು
ಎಲ್ಲವನ್ನ ಕಳೆದುಕೊಂಡು ಬೀದಿಗೆ ಬಂದಿದ್ದರು. ಪದ್ಮಶಾಲಿಗಳು ಹೀಗೆ ಹಲವಾರು ಭಾರಿ ಹಿಂಸೆಗೆ ಒಳಗಾಗಿ ನೊಂದು ಬೆಂದು
ಹೋಗಿದ್ದರು.
ತೆಲುಗು ಸಮುದಾಯ ಅದರಲ್ಲೂ ತೆಲಂಗಾಣದಿಂದ ವಲಸೆ ಬಂದಿದ್ದ ಪದ್ಮಶಾಲಿ ನೇಕಾರರು ಈ ಹಲ್ಲೆ, ಹಿಂಸೆ, ನೋವು
ಸಹಿಸಿಕೊಂಡಿದ್ದು ಇದೇ ಮೊದಲಲ್ಲ, ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ತೆಲಂಗಾಣ ವನ್ನು ಆಳಿದ ರಜಾಕಾರು
ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಗೊಳಿಸಲು ಯತ್ನಿಸುತಿದ್ದರು. ಮತಾಂತರವನ್ನ ಒಪ್ಪದವರಿಗೆ ಭಾರೀ ಹಿಂಸೆ
ಕಿರುಕುಳ ನೀಡುತಿದ್ದರು. ಈ ಧಾರ್ಮಿಕ ಮತಾಂತರದ ಭಯದಿಂದ ಪದ್ಮಶಾಲಿ ಸಮುದಾಯ ಸೇರಿದಂತೆ ವಿವಿಧ ತೆಲುಗು
ಹಿಂದೂ ಸಮುದಾಯಗಳಿಗೆ ಸೇರಿದ ಜನರು ದೇಶದ ವಿವಿಧ ಭಾಗಗಳಿಗೆ ವಲಸೆ ಹೋದರು. ರಜಾಕರ ದೌರ್ಜನ್ಯಕ್ಕೆ ಹೆದರಿ
ದೊಡ್ಡ ಸಂಖ್ಯೆಯಲ್ಲಿ ಪದ್ಮಶಾಲಿಗಳು ಮಹಾರಾಷ್ಟ್ರ ರಾಜ್ಯದಾದ್ಯಂತ ಸೊಲ್ಲಾಪುರ, ಪರ್ಬನಿ, ನಾಂದೇಡ್,
ಅಹ್ಮದ್‌ನಗರ, ಇಚ್ಚಲಕರಂಜಿ, ಮಾಲೆಗಾಂವ್, ಪುಣೆ ಮತ್ತು ಮುಂಬೈ ಮುಂತಾದ ಸ್ಥಳಗಳಿಗೆ ವಲಸೆ ಹೋಗಿದ್ದರು.
ಒಂದು ವಿಷಯ ಗಮನಿಸಬೇಕಿದೆ. ವಲಸೆ ಹೋಗುವುದರಿಂದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದು ಬಹಳಷ್ಟು
ಸಾರಿ ನಿಜವಾಗುವುದಿಲ್ಲ. ಹೊಸ ಸಮಸ್ಯೆಗಳು ಉದ್ಭವವಾಗಬಹುದು, ಬದುಕುವುದಕ್ಕೋಸ್ಕರ ಅವೆಲ್ಲವನ್ನ ಮೆಟ್ಟಿ
ನಿಲ್ಲುವಂತಹ ಸಾಹಸವನ್ನ ಸಹ ಮಾಡಬೇಕಾಗುತ್ತದೆ. ನೇಕಾರರು ವಲಸೆ ಹೋಗುವುದಿಕ್ಕೆ ಕಾರಣವೇನು ಎನ್ನುವುದನ್ನ
ಹಿಂದಿನ ಲೇಖನದಲ್ಲಿ ತಿಳಿಸಿದ್ದೇನೆ. ಈ ಬಾರಿ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದ ನೇಕಾರರ ಏಳು ಬೀಳುಗಳ ಕುರಿತು
ತಿಳಿಯೋಣ.


ಆಗ ಭಾರತದೇಶಕ್ಕೆ ಸ್ವಾತಂತ್ರ್ಯ ದೊರಕಿತ್ತು. 1947 ರ ಸಮಯ. ನೇಯ್ಗೆ ತಂತ್ರಜ್ಞಾನದಲ್ಲಿ ಕೌಶಲ್ಯವನ್ನ ಹೊಂದಿದ್ದ
ಪದ್ಮಶಾಲಿ ನೇಕಾರರು, ವೃತ್ತಿಯಲ್ಲಿ ಏಕತಾನತೆಯಿಂದ ಬೇಸತ್ತಿದ್ದರು. ಅಲ್ಲದೆ ಮಗ್ಗದ ಕೈಗಾರಿಕೆಗಳಲ್ಲಿ ಯಾವುದೇ
ತಾಂತ್ರಿಕ ಬೆಳವಣಿಗೆಯಿರಲಿಲ್ಲ. ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಮಗ್ಗಗಳಲ್ಲಿ ದುಡಿಯುತಿದ್ದ ಕಾರ್ಮಿಕರು ಹತ್ತು
ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರೂ ಸರಿಯಾದ ಸಂಭಾವನೆ ಸಿಗುತ್ತಿರಲಿಲ್ಲ. ಆದ್ದರಿಂದ, ದುಡಿಮೆಗೆ ತಕ್ಕಂತೆ
ಸೂಕ್ತ ವೇತನ ಪಡೆಯಲು ಅವರು ತೆಲಂಗಾಣವನ್ನು ತೊರೆದು ದೇಶದ ವಿವಿಧ ಭಾಗಗಳಿಗೆ ವಲಸೆ ಹೋದರು, ಅವರಲ್ಲಿ
ಹೆಚ್ಚಿನವರು ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಾರೆ. ಸೀರೆಗಳು ಮತ್ತು ಧೋತಿಗಳು ಮತ್ತು ರೇಷ್ಮೆ ನೇಯ್ಗೆ ಯಲ್ಲಿ
ವಿಶೇಷ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯಲ್ಲಿ ನೆಲೆಸಿದ್ದ ನೇಕಾರರು ಮುಂಬೈ
ಮತ್ತು ಮಹಾರಾಷ್ಟ್ರದ ಇತರ ಸ್ಥಳಗಳಾದ ಸೊಲ್ಲಾಪುರ, ಪರ್ಬಾನಿ, ನಾಂದೇಡ್, ಅಹಮದ್‌ನಗರ, ಇಚ್ಚಲಕರಂಜಿ,
ಮಾಲೆಗಾಂವ್ ಮತ್ತು ಪುಣೆಗೆ ಕೆಲಸಕ್ಕಾಗಿ ವಲಸೆ ಬಂದರು. ಈ ಎಲ್ಲಾ ವಾಣಿಜ್ಯ ಕೇಂದ್ರಗಳು ರೇಷ್ಮೆ ಮತ್ತು ಹತ್ತಿ
ಮಾರುಕಟ್ಟೆಗಳಲ್ಲಿ ಹೆಸರುವಾಸಿ ಯಾಗಿರುವುದರಿಂದ, ಪದ್ಮಶಾಲಿ ನೇಕಾರರು ಈ ಪ್ರದೇಶದತ್ತ ಸಹಜವಾಗಿ
ಆಕರ್ಷಿತರಾದರು. ಮುಂಬೈಗೆ ವಲಸೆ ಬಂದ ಪದ್ಮಶಾಲಿ ನೇಕಾರರು ಪವರ್ ಲೂಮ್ ಮಿಲ್‌ಗಳಲ್ಲಿ ಬಟ್ಟೆ ತಯಾರಿಸಿ ದಿನ
ವೇತನವನ್ನ ಪಡೆಯುತ್ತಿದ್ದರು. ಉದ್ದವಾದ ಸೀರೆಗಳು ಮತ್ತು ಧೋತಿಗಳು, ಪ್ಯಾಂಟ್‌ಗಳು, ಶರ್ಟ್‌ಗಳ ಬಟ್ಟೆ ಮತ್ತು
ಕರವಸ್ತ್ರಗಳನ್ನ ತಯಾರಿಸುವ ಕಲಾತ್ಮಕ ಸಾಮರ್ಥ್ಯವನ್ನು ಹೊಂದಿದ್ದರಿಂದ ಅವರು ಮುಂಬೈನ ನೂಲಿನ ಗಿರಣಿಗಳಲ್ಲಿ
ತಮ್ಮನ್ನ ತೊಡಗಿಸಿಕೊಂಡರು. ಜವಳಿ ಕ್ಷೇತ್ರದಲ್ಲಿ ಹಿಡಿತವನ್ನ ಹೊಂದಿದ್ದ ಪದ್ಮಶಾಲಿ ನೇಕಾರ ಸಮುದಾಯ, ಅವರ ಜ್ಞಾನ
ಮತ್ತು ಕೌಶಲ್ಯ ದ ನೆರವಿನಿಂದ ಬಟ್ಟೆ ತಯಾರಿಕೆಯಲ್ಲಿ ಅಲ್ಲಿನ ಉದ್ಯಮ ಅತಿವೇಗವನ್ನ ಪಡೆದುಕೊಂಡಿತು. ಪದ್ಮಶಾಲಿ
ನೇಕಾರರ ಕಲಾಕೃತಿಯಲ್ಲಿನ ಕೌಶಲ್ಯ ಮತ್ತು ನವೀನತೆಯು ಅವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ
ಹೆಚ್ಚಿತು. ಇದರ ಪರಿಣಾಮವಾಗಿ ಗಿರಣಿಗಳ ಮಾಲೀಕರು ತಮ್ಮ ಉದ್ಯಮವನ್ನ ವಿಸ್ತರಿಸಿದರು. ಹೆಚ್ಚಿದ ಮಾರುಕಟ್ಟೆಯ
ಬೇಡಿಕೆ, ಹೊಸದಾಗಿ ನಿರ್ಮಾಣಗೊಂಡ ಜವಳಿ ಗಿರಣಿಗಳು, ನೇಕಾರರು, ಕಾರ್ಮಿಕರನ್ನ ಹೊಸ ಉದ್ಯಮ ಕೈಬೀಸಿ
ಕರೆಯುತಿತ್ತು. ಕಾರ್ಮಿಕರ ಬೇಡಿಕೆಯು ಹೆಚ್ಚಾಯಿತು. ಆಗಿನ ಆಂಧ್ರಪ್ರದೇಶದ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ.
ರಜಾಕರ್ ಬೆದರಿಕೆ, ರಾಜಕೀಯ ಅಭದ್ರತೆಯ ಕಾರಣದಿಂದಾಗಿ ಕೆಲಸ ಮಾಡಲು ಹೆಚ್ಚು ಅನುಕೂಲಕರವಾಗಿರಲಿಲ್ಲ.
ಮುಂಬಯಿಯ ಹೊಸ ಉದ್ಯೋಗವಕಾಶಗಳನ್ನ ಸದುಪಯೋಗಪಡಿಸಿಕೊಳ್ಳುವ ಪ್ರಯತ್ನದಲ್ಲಿ, ಈಗಾಗಲೇ
ಮುಂಬೈನಲ್ಲಿದ್ದ ಪದ್ಮಶಾಲಿಗಳು ತಮ್ಮ ಮೂಲ ಸ್ಥಳಗಳಿಂದ ತಮ್ಮ ಸಂಬಂಧಿಕರನ್ನು ಇಲ್ಲಿಗೆ ಕರೆತಂದರು. ಈ ಮೂಲಕ
ಮುಂಬೈಗೆ ವಲಸೆ ಬಂದ ಲಕ್ಷಾಂತರ ತೆಲುಗರಲ್ಲಿ ಪದ್ಮಶಾಲಿಗಳು ಪ್ರಬಲ ವರ್ಗವಾದರು. ಅವರು ವರ್ಲಿ, ಗಾಂಧಿನಗರ,
ಬೆಂಗಾಲ್ ಕ್ಯಾಂಪ್, ದಾದರ್, ಘಾಟ್ಕೋಪರ್, ಧಾರಾವಿ, ಸಿಯಾನ್, ಅಂಧೇರಿ, ಕುರ್ಲಾ, ಜೋಗೇಶ್ವರಿ ಮತ್ತು ಇತರ
ಅನೇಕ ಸ್ಥಳಗಳಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಂಡು ಆ ಪ್ರದೇಶಗಳಲ್ಲಿ ನೆಲೆಸಿದರು.


ಮಹಾರಾಷ್ಟ್ರದ ಹೆಸರಾಂತ ಯೂನಿಯನ್ ನಾಯಕ ದತ್ತಾ ಸಾಮಂತ್ ರ ಪ್ರವೇಶ: 1965 ರವರೆಗೂ ಎಲ್ಲವೂ ಸುಗಮವಾಗಿ
ನಡೆಯುತ್ತಿತ್ತು. ಉದ್ಯೋಗ ಭದ್ರತೆ, ಬೋನಸ್, ಆರೋಗ್ಯ ಭತ್ಯೆ ಮುಂತಾದ ವಿಷಯಗಳ ಕುರಿತು ಮಿಲ್ ಗಳಲ್ಲಿ
ದುಡಿಯುತಿದ್ದ ನೇಕಾರರು, ಕಾರ್ಮಿಕರು ಹೋರಾಟ ಶುರುವಿಟ್ಟುಕೊಂಡರು. ಆಗ ಮಿಲ್ ಗಳ ಕಾರ್ಮಿಕರ ಪರವಾಗಿ
ಮಹಾರಾಷ್ಟ್ರದ ಯೂನಿಯನ್ ನಾಯಕ ದತ್ತಾ ಸಾಮಂತ್ ರ ಪ್ರವೇಶವಾಯಿತು. ಅವರು ಇದ್ದಕ್ಕಿದ್ದಂತೆ ಕಾರ್ಮಿಕರ
ವೇತನವನ್ನು ಹೆಚ್ಚಿಸುವಂತೆ ಧರಣಿ, ಮುಷ್ಕರ ನಡೆಸಲು ಪ್ರಾರಂಭಿಸಿದರು. ಮಾಲೀಕರ ಬಳಿ ಹೊಸ ಹೊಸ
ಬೇಡಿಕೆಗಳನ್ನಿಟ್ಟರು. ಈ ಬೇಡಿಕೆಗಳನ್ನು ಈಡೇರಿಸಲು ಗಿರಣಿಗಳ ಮಾಲೀಕರು ನಿರಾಕರಿಸಿದರು. ದತ್ತಾ ಸಾಮಂತ್ ಹಠ ಬಿಡದೆ
ಮಿಲ್ ಗಳನ್ನ ಮುಚ್ಚುವ ತನಕ ಮುಷ್ಕರ ನಡೆಸಿದರು. ಮಾಲೀಕರು ಬಗ್ಗಲೇ ಇಲ್ಲ. ಇದರ ಪರಿಣಾಮ ಮಿಲ್ ಗಳು ಮುಚ್ಚಿ
ಹೋದವು ಸಾವಿರಾರು ಕಾರ್ಮಿಕರು ಬೀದಿ ಪಾಲಾದರು. ಅಪಾರ ನಷ್ಟ ಅನುಭವಿಸಿದ ಮಾಲೀಕರು ಮಿಲ್ ಗಳನ್ನ
ಮಾರಿದ್ದಲ್ಲದೆ, ಅಲ್ಲಿದ್ದ ಯಂತ್ರೋಪಕರಣಗಳು, ವಿದ್ಯುತ್ ಮಗ್ಗಗಳನ್ನ ಸಹ ಮಾರಿ ಕಾರ್ಮಿಕರಿಗೆ ಕೊಡಬೇಕಾಗಿದ್ದ
ಬೋನಸ್, ಮೆಡಿಕ್ಲೈಮ್, ಬಾಕಿ ರಜೆಯ ವೇತನಗಳನ್ನ ಪಾವತಿಸಿದರು, ಬ್ಯಾಂಕ್ ಸಾಲಗಳನ್ನ ತೀರಿಸಲು
ಪರದಾಡಬೇಕಾಯಿತು, ಕೊನೆಗೆ ಮಾಲೀಕರು ದಿವಾಳಿ ಎಂದು ಘೋಷಿಸಿಕೊಂಡರು. ದತ್ತಾ ಸಾಮಂತರ ಈ ಹೋರಾಟದಿಂದ
ಕಾರ್ಮಿಕರಷ್ಟೇ ಅಲ್ಲದೇ, ಮಾಲೀಕರು ಸಹ ಬೀದಿಗೆ ಬರುವಂತಾಯಿತು.


ಭಿವಂಡಿಯಲ್ಲಿ ಪದ್ಮಶಾಲಿಗರ ಸಾಹಸಗಾಥೆ: ಯಾವಾಗ ಮಾಲೀಕರು ಯಂತ್ರೋಪಕರಣಗಳು, ವಿದ್ಯುತ್ ಮಗ್ಗಗಳನ್ನ
ಮಾರಾಟ ಮಾಡಲು ಪ್ರಾರಂಬಿಸಿದರೋ, ವಿಶೇಷವಾಗಿ ಪದ್ಮಶಾಲಿ ನೇಕಾರರು, 10, 20, 25 ಜನರ ಗುಂಪುಗಳನ್ನು ರಚಿಸಿ
ಕೊಂಡು, ತಮ್ಮಲ್ಲಿದ್ದ ಬೋನಸ್‌ ಹಣ, ಉಳಿತಾಯದ ಹಣ ಮತ್ತಿತರ ಮೂಲಗಳಿಂದ ಸಂಗ್ರಹಿಸಿದ ಹಣದಿಂದ
ಮಾರಾಟಕ್ಕಿದ್ದ ಮಗ್ಗಗಳನ್ನು ಖರೀದಿಸಿ, ಮುಂಬೈನಿಂದ ನಲವತ್ತು ಮೈಲಿ ದೂರದಲ್ಲಿರುವ ಭಿವಂಡಿ ಎಂಬ ಸಣ್ಣ
ಹಳ್ಳಿಯಂತಹ ಹಿಂದುಳಿದ ಪಟ್ಟಣಕ್ಕೆ ತಂದರು. ಆ ಸಮಯದಲ್ಲಿ ಭಿವಂಡಿಯಲ್ಲಿ ಕೆಲವೇ ಪದ್ಮಶಾಲಿಗಳು ಇದ್ದರು ಮತ್ತು
ಅವರಲ್ಲಿ ಹೆಚ್ಚಿನವರು ಕೃಷಿ ಕಾರ್ಮಿಕರಾಗಿ ತೊಡಗಿಸಿಕೊಂಡಿದ್ದರೆ, ಬೆರಳೆಣಿಕೆಯಷ್ಟು ಮಂದಿ ಮುಸ್ಲಿಮರಿಗೆ ಸೇರಿದ ಸಣ್ಣ
ಕೈಮಗ್ಗ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಈಗಾಗಲೇ ಭಿವಂಡಿಯಲ್ಲಿ ವಾಸಿಸುತ್ತಿರುವ ಪದ್ಮಶಾಲಿಗಳು
ಹೊಸದಾಗಿ ವಲಸೆ ಬಂದ ಪದ್ಮಶಾಲಿಗಳ ಬಡಾವಣೆಗಳ ನಿರ್ಮಾಣಕ್ಕೆ, ಹಾಗೂ ಮಗ್ಗಗಳನ್ನ ಸ್ಥಾಪಿಸುವುದಿಕ್ಕೆ ಸಹಾಯ
ಮಾಡಿದರು. 1960 ರ ಸಮಯದಲ್ಲಿ ಭಿವಂಡಿಯು ಮರಾಠರು, ಮುಸ್ಲಿಮರು ಮತ್ತು ಕೊಂಕಣಿಗಳ ಪ್ರಾಬಲ್ಯವನ್ನು
ಹೊಂದಿತ್ತು. ಪದ್ಮಶಾಲಿಗಳು ಅಲ್ಲಲ್ಲಿ ಭೂಮಿಯನ್ನು ಖರೀದಿಸಿ ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಿದರು, ಆ
ಮನೆಗಳಲ್ಲಿ ಪವರ್ ಲೂಮ್‌ಗಳಿಗೆ ಜಾಗ ಮತ್ತು ಅವುಗಳನ್ನು ನಿರ್ವಹಿಸಲು ಸ್ಥಳಾವಕಾಶವಿರುವ ರೀತಿಯಲ್ಲಿ
ಕಟ್ಟಡಗಳನ್ನ ನಿರ್ಮಿಸಿದರು. ತಮ್ಮ ಕೌಶಲ್ಯತೆ ಉಪಯೋಗಿಸಿಕೊಂಡು ಮತ್ತು ಗುಣಮಟ್ಟದ ಬಟ್ಟೆಯನ್ನು ಅವರು
ತಯಾರಿಸಲು ಪ್ರಾರಂಭಿಸಿದರು.

ಮುಂಬಯಿಯಲ್ಲಿ ಗಿರಣಿಗಳು ಮುಚ್ಚಲ್ಪಟ್ಟಿದ್ದರಿಂದ ಮತ್ತು ಬಟ್ಟೆಯ ಉತ್ಪಾದನೆಯು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ
ಕುಸಿದಿತ್ತು. ಅಲ್ಲಿನ ವ್ಯಾಪಾರಿಗಳು ಭಿವಂಡಿಗೆ ಹೋಗಿ ನೇಕಾರರನ್ನ ಭೇಟಿ ಮಾಡಿ, ತಮಗೆ ಬೇಕಾದ ವಿನ್ಯಾಸ ಮತ್ತು
ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ವ್ಯವಹಾರ ಕುದುರಿಸಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಪದ್ಮಶಾಲಿ ನೇಕಾರರ
ಬಟ್ಟೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿತು. ವಾಸ್ತವವಾಗಿ, ಬಟ್ಟೆಯ ಗುಣಮಟ್ಟ ಚೆನ್ನಾಗಿದ್ದಿದ್ದರಿಂದ ವ್ಯಾಪಾರಿಗಳು
ತುಂಬಾ ಸಂತೋಷ ದಿಂದಲೇ ತಮ್ಮ ಉತ್ಪನ್ನದ ಪ್ರಮಾಣವನ್ನು ಹೆಚ್ಚಿಸಲು ಹೆಚ್ಚಿನ ಹಣವನ್ನು ನೀಡಿದರು. ಅದರ
ನಂತರ, ಭಿವಂಡಿಯಲ್ಲಿ ಹೆಚ್ಚುವರಿ ಮಗ್ಗಗಳನ್ನು ಸ್ಥಾಪಿಸಲಾಯಿತು. ಹೀಗಾಗಿ ಭಿವಂಡಿಯಲ್ಲಿ ವಿದ್ಯುತ್-ಮಗ್ಗದ
ವ್ಯಾಪಾರವು ಬಹಳ ಅಭಿವೃದ್ಧಿಯನ್ನ ಹೊಂದಿತು.

ಭಿವಂಡಿಯಲ್ಲಿ ಕಿರುಕುಳ ಶುರುವಾಯಿತು: ಕುತೂಹಲಕರ ವಿಷಯವೇನೆಂದರೆ, ಆ ಸಮಯದಲ್ಲಿ ಭಿವಂಡಿಯಲ್ಲಿ
ವಾಸಿಸುತ್ತಿದ್ದ ಇತರ ಸಮುದಾಯದ ಜನರು ತೆಲುಗು ಸಮುದಾಯದ, ವಿಶೇಷವಾಗಿ ಪದ್ಮಶಾಲಿಗಳ ಪ್ರಗತಿಯನ್ನು
ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಡಿಮೆ ಸಮಯದಲ್ಲಿ ಅಭಿವೃದ್ದಿ ಹೊಂದಿದ ವಿಧಾನ ಸ್ಥಳೀಯರಿಗೆ ಕಣ್ಣುಕುಕ್ಕುವಂತೆ
ಮಾಡಿತ್ತು. ಹೀಗಾಗಿ ಪದ್ಮಶಾಲಿ ನೇಕಾರರನ್ನ ಊರಿನಿಂದ ಹೊರಹಾಕ ಬೇಕು ಎಂದು ಕ್ವಿಟ್ ಭಿವಂಡಿ, ನಮ್ಮ ಭಿವಂಡಿಯನ್ನ
ಬಿಟ್ಟು ತೊಲಗಿ ಎನ್ನುವ ಹಿಂಸಾತ್ಮಕ ಅಭಿಯಾನವನ್ನ ಶುರು ಮಾಡಿದರು. ಮಕ್ಕಳು, ಹೆಂಗಸರು ಎನ್ನದೇ ಎಲ್ಲರಿಗೂ
ಕಿರುಕುಳ ಕೊಡಲು ಪ್ರಾರಂಭಿಸಿದರು. ಒಂದು ಸಮಯದಲ್ಲಿ, ಪದ್ಮಶಾಲಿ ಸಮುದಾಯದ ಶಾಲಾ ಮಕ್ಕಳ ಮೇಲೆ ಕಲ್ಲಿನಿಂದ
ಹಲ್ಲೆ ಮಾಡುವ ಮಟ್ಟಕ್ಕೆ ಸಹ ಅವರು ಹೋದರು. ಮಹಿಳೆಯರಿಗೆ ಬೀದಿಗಳಲ್ಲಿ ಕಿರುಕುಳ ನೀಡಿದರು. ಗಂಡಸರು ಮನೆ
ಬಿಟ್ಟು ಹೊರಬರದಂತಹ ಸನ್ನಿವೇಶ ನಿರ್ಮಾಣವಾಯಿತು. ಈ ಎಲ್ಲಾ ಅಹಿತಕರ ಘಟನೆಗಳು ಭಿವಂಡಿಯಲ್ಲಿ ಪದ್ಮಶಾಲಿ
ಸಮುದಾಯದ ಉಳಿವಿಗೆ ಆತಂಕವನ್ನ ತಂದೊಡ್ಡಿದವು.


ಇದುವರೆವಿಗೂ ಯಾವುದೇ ಪ್ರತಿರೋಧ ಒಡ್ಡದೆ ಸುಮ್ಮನಿದ್ದ ಸಮುದಾಯದ ಹಿರಿಯರು, ಚಿಂತಕರು ಎಲ್ಲರೂ ಒಗ್ಗೂಡಿ
ಸ್ಥಳೀಯರ ವಿರುದ್ಧ ಸಂಘಟಿತರಾಗಿ ಪ್ರತಿಭಟಿಸಲು ನಿಂತರು. ಅಖಿಲ ಭಾರತ ಪದ್ಮಶಾಲಿ ಸಮಾಜ ಎನ್ನುವ
ಸಂಘಟನೆಯನ್ನು ಸ್ಥಾಪಿಸಿದರು. ಭಿವಂಡಿಯಲ್ಲಿ ನೆಲೆಸಿದ್ದ ಪದ್ಮಶಾಲಿಗಳೆಲ್ಲರೂ ಈ ಸಂಸ್ಥೆಯ ಸದಸ್ಯರಾದರು. ಇನ್ನು
ಮುಂದೆ ಯಾವುದೇ ಸಮಸ್ಯೆ ಬಂದರೆ ಪೊಲೀಸ್ ದೂರು ದಾಖಲಿಸಲಾಗುವುದು ಎಂದು ಭಿವಂಡಿ ಯಲ್ಲಿನ ಜನರಿಗೆ
ಮನದಟ್ಟು ಮಾಡಿದರು. ಭಾರತದ ಪ್ರಜೆಯಾಗಿ ಎಲ್ಲಿ ಬೇಕಾದರು ನೆಲೆಸಬಹುದು ಎನ್ನಿವ ಸಂವಿಧಾನದ ಆಶಯವನ್ನ
ಸ್ಪಷ್ಟಪಡಿಸಿದರು. ಈ ಎಲ್ಲ ಘಟನೆಗಳು ಭಿವಂಡಿಯ ಮೂಲ ನಿವಾಸಿಗಳು ಸುಮ್ಮನೆ ಇರುವಂತೆ ಮಾಡಿದವು. ಕೆಲವು
ವಿದ್ಯಾವಂತ ಪದ್ಮಶಾಲಿಗಳು ಪದ್ಮಶಾಲಿ ತೆಲುಗು ಸಮಾಜ ಶಿಕ್ಷಣ ಸಂಸ್ಥೆ ಎಂಬ ಮತ್ತೊಂದು ಸಂಸ್ಥೆಯನ್ನು ರಚಿಸಿದರು,


ಅಲ್ಲಿ ತೆಲುಗು, ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಇತರ ವಿಷಯಗಳನ್ನು ಶಾಲೆಯಲ್ಲಿ ಕಲಿಸಲು ಪ್ರಾರಂಭಿಸಿದರು.
ಪದ್ಮಶಾಲಿಗಳ ಹಿತದೃಷ್ಟಿಯಿಂದ ಈ ಸಮಯದಲ್ಲಿ ಸುಮಾರು ಹತ್ತರಿಂದ ಹನ್ನೆರಡು ತೆಲುಗು ಶಾಲೆಗಳು ಭಿವಂಡಿ ಪುರಸಭೆ
ವ್ಯಾಪ್ತಿಯಲ್ಲಿ ಉದ್ಘಾಟನೆಗೊಂಡವು. ಪದ್ಮಶಾಲಿ ಪುರೋಹಿತ ಸಂಘ ಎನ್ನುವ ಮತ್ತೊಂದು ಸಂಘಟನೆಯನ್ನ ಶುರು
ಮಾಡಿದರು, ಈ ಮೊದಲು ಮದುವೆ ಕಾರ್ಯಗಳಿಗೆ ತಮ್ಮ ಮೂಲಊರುಗಳಲ್ಲಿ ನಡೆಸುತಿದ್ದರು. ಈ ಘಟನೆಗಳ ನಂತರ
ಮದುವೆಗಳು ಸಹ ಭಿವಂಡಿಯಲ್ಲಿಯೇ ನಡೆದವು. "ಪದ್ಮ-ಬ್ರಾಹ್ಮಣರು" ಎಂದು ಕರೆಯಲ್ಪಡುವ ಪದ್ಮಶಾಲಿ
ಪುರೋಹಿತರು ಭಿವಂಡಿಯಲ್ಲಿಯೇ ವಿವಾಹ ವಿಧಿ ವಿಧಾನಗಳನ್ನು ನೆರವೇರಿಸುತಿದ್ದಾರೆ.



ಯಾವಾಗ ಪದ್ಮಶಾಲಿ ಸಂಘಟನೆಗಳು ಬಲಶಾಲಿಗೊಂಡವೋ, ಶಾಸಕರು, ಸಂಸದರು, ಮತ್ತಿತರ ರಾಜಕೀಯ ನಾಯಕರು ಪೆದ್ದ
ಮನಿಷಿ ಎಂದು ಕರೆಯಲ್ಪಡುವ ಸಮಾಜದ ಹಿರಿಯರನ್ನ ಭೇಟಿ ಮಾಡಲು ಪ್ರಾರಂಬಿಸಿದರು. ಪದ್ಮಶಾಲಿಗಳಿಗೆ ಭದ್ರತೆ ಮತ್ತು
ರಕ್ಷಣೆಯ ದೃಷ್ಟಿಯಿಂದ ಈ ಹಿರಿಯರು ಹೇಳಿದಂತೆ ಯಾರಿಗೆ ಮತ ಹಾಕಬೇಕೋ ಅವರಿಗೆ ಸಮುದಾಯದ ಮತಗಳು
ಬೀಳುತಿದ್ದವು. ಹೀಗಾಗಿ ರಾಜಕೀಯ ಬೆಂಬಲವೂ ಪದ್ಮಶಾಲಿ ಸಮುದಾಯಕ್ಕೆ ಸಿಗಲು ಸಾಧ್ಯವಾಯಿತು. ಕೇವಲ ಆರೇಳು
ವರ್ಷಗಳಲ್ಲಿ ಈ ಸಂಘಟನೆಗಳ ಸಹಾಯದಿಂದ ಪದ್ಮಶಾಲಿ ಸಮುದಾಯ ಉತ್ತಮ ಅಭಿವೃದ್ದಿ ಕಂಡಿತು.
ಹಿಂದೂ ಮುಸ್ಲಿಂ ಕೋಮುಗಲಭೆ: ಸಮಸ್ಯೆ ಅಲ್ಲಿಗೆ ಬಗೆಹರಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಮಸ್ಯೆ
ಉದ್ಭವವಾಯಿತು. 1970 ರಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಕೋಮು ಗಲಭೆ ಏರ್ಪಟ್ಟಿತು. ಈ
ಸಮಯದಲ್ಲಿ ಸಮುದಾಯಕ್ಕೆ ಅಪಾರವಾದ ನಷ್ಟವಾಯಿತು. ಮನೆಗಳು, ಅಂಗಡಿಗಳು, ಮಗ್ಗಗಳು, ಕಚ್ಚಾ ವಸ್ತುಗಳು,
ಸಿದ್ದಪಡಿಸಿದ ಜವಳಿ ಉತ್ಪನ್ನಗಳು ಕೋಮು ದಳ್ಳುರಿಗೆ ಭಸ್ಮವಾದವು. ಈ ಗಲಭೆಯಲ್ಲಿ ಸುಮಾರು ಜನ ಮರಣ
ಹೊಂದಿದರು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿತ ಸ್ಥಳೀಯ ಇತರೆ ಹಿಂದೂಗಳು ಈ ಗಲಭೆಯ ನಂತರ ಪದ್ಮಶಾಲಿಗಳ
ಜತೆ ಒಗ್ಗಟ್ಟಾದರು. ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತರು. ಕೋಮು ಗಲಭೆ ತಣ್ಣಗಾಯಿತು.



 ಆಗಿನ ಭಾರತದ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ದಿವಂಗತ ಇಂದಿರಾ ಗಾಂಧಿಯವರು ಭಿವಂಡಿಗೆ ಭೇಟಿ ನೀಡಿ ನಷ್ಟದ ಪ್ರಮಾಣವನ್ನು ಪರಿಶೀಲಿಸಿದರು. ಅವರು ಎಲ್ಲಾ ಸಮುದಾಯಗಳ ಪ್ರಮುಖರನ್ನು ಭೇಟಿಯಾಗಿ ಚರ್ಚಿಸಿದರು. ಕುಟುಂಬದ ಸದಸ್ಯರು ಮತ್ತು ಆಸ್ತಿಗಳನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಪ್ರತ್ಯೇಕವಾಗಿ ಪರಿಹಾರ ಧನ ವನ್ನು ಘೋಷಿಸಿದರು.
ಭಿವಂಡಿಯಲ್ಲಿ ಲಘು ಉದ್ಯೋಗ್ ಸಂಸ್ಥೆ ಅಂದರೆ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿರುವವರಿಗೆ
ಸಬ್ಸಿಡಿಗಳನ್ನು ಒದಗಿಸಲಾಗುವುದು ಎಂದು ಅವರು ಘೋಷಿಸಿದರು. ಈ ಸುದ್ದಿಯು ದೇಶದಾದ್ಯಂತ ಹರಡಿತು ಮತ್ತು
ಭಿವಂಡಿಯಲ್ಲಿ ಹೊಸದಾಗಿ ಸಣ್ಣ ಕಾರ್ಖಾನೆಗಳು ಮತ್ತು ವಿದ್ಯುತ್ ಮಗ್ಗಗಳು ಪ್ರಾರಂಭವಾದವು, ಇದರ ಪರಿಣಾಮವಾಗಿ
ಮತ್ತೊಮ್ಮೆ ಜನಸಂಖ್ಯೆಯು ಹೆಚ್ಚಾಯಿತು. ಇಷ್ಟೆಲ್ಲಾ ನಡೆಯುತ್ತಿರುವಾಗ, ಭಿವಂಡಿಯಲ್ಲಿ ಭೂಮಾಲೀಕರಾಗಿದ್ದ ಕೆಲವು
ಪದ್ಮಶಾಲಿಗಳು ಒಟ್ಟು ಗೂಡಿ ಕಟ್ಟಡಗಳು ಮತ್ತು ಮನೆಗಳನ್ನು ನಿರ್ಮಿಸುವ ಕೆಲಸವನ್ನು ಕೈಗೆತ್ತಿಕೊಂಡರು, ಇದರಿಂದ
ತೆಲುಗು ಸಮುದಾಯದ ಎಲ್ಲಾ ಜನರು ಅಲ್ಲಿ ಮನೆಗಳನ್ನ ಕಟ್ಟಿಸಿಕೊಂಡು ವಾಸಿಸುತ್ತಾರೆ. ಮುಂದೆ ಈ ಪ್ರದೇಶವು ;ಪದ್ಮ
ನಗರ; ಎನ್ನುವ ಹೆಸರನ್ನ ಪಡೆಯುತ್ತದೆ.

ನೋಡಿದ್ರಲ್ಲ!!! ವಲಸೆ ಹೋಗುವುದರಿಂದ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದು ಬಹಳಷ್ಟು ಸಾರಿ
ನಿಜವಾಗುವುದಿಲ್ಲ. ಹೊಸ ಸಮಸ್ಯೆಗಳು ಉದ್ಭವವಾಗಬಹುದು, ಬದುಕುವುದಕ್ಕೋಸ್ಕರ ಅವೆಲ್ಲವನ್ನ ಮೆಟ್ಟಿ
ನಿಲ್ಲುವಂತಹ ಸಾಹಸವನ್ನ ಸಹ ಮಾಡಬೇಕಾಗುತ್ತದೆ.
------
ಪಿ.ಎಸ್.ರಂಗನಾಥ
ಲೇಖಕರು,
ಸಂಚಾಲಕರು - ಒಮಾನ್ ಕನ್ನಡಿಗರ ವೇದಿಕೆ
ಮತ್ತು ಮಾಜಿ ಕಾರ್ಯದರ್ಶಿ.
ಭಾರತೀಯ ಸಾಮಾಜಿಕ ವೇದಿಕೆ - ಮಸ್ಕತ್ ಒಮಾನ್

Sunday, January 1, 2023

ಕರಾವಳಿ ಪದ್ಮಶಾಲಿಗರಲ್ಲಿ ಗೊಂದಲ ನಿವಾರಣೆಗೆ ಆದಿ ಮೂಲ ಶೋಧನೆ

ಕರಾವಳಿ ಪದ್ಮಶಾಲಿಗರ ಮೂಲದ ಕುರಿತ ದಕ್ಷಿಣ ಕನ್ನಡದ ಸುರತ್ಕಲ್ ನ ಶ್ರೀ ಗೋಪಾಲ ಹರಿಹರಪುರ ಅನಂತ ಶೆಟ್ಟಿಗಾರ್ ಅವರೊಂದಿಗಿನ ಪ್ರಶ್ನೋತ್ತರದ ವಿವರಗಳು.



ಪ್ರಶ್ನೆ:- ನೀವು ಕರಾವಳಿ ಪದ್ಮಶಾಲಿಗರ ಮೂಲ ವನ್ನು ಏಕೆ ಹುಡುಕಲು ಆರಂಭಿಸಿದಿರಿ?

2008ರಲ್ಲಿ ನಾನು ದ ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷನಾಗಿದ್ದಾಗ , ನಮ್ಮ ಸಮಾಜದಲ್ಲಿ ಸ್ವಲ್ಪ ಗೊಂದಲದಿಂದ ಕೂಡಿದ ವಿಷಯಗಳಾದ    ನಮ್ಮ 1)ಗುರು (ಸರಿಯಾದ ಗುರುವಿನ ಆರಾಧನೆ ಇಲ್ಲದಿರುವುದು),  2)ಗೋತ್ರ ( ಮೇಲು ಕೀಳು ಎಂಬ ಆಚರಣೆ, ಇದರಿಂದ ಎರಡು ಗೋತ್ರಗಳು ಅಸ್ತಿತ್ವ ಕಳೆದುಕೊಂಡಿರುವುದು) 3)ಆಹಾರ (ವಿವಾಹದಂತ ಕಾರ್ಯದಲ್ಲಿಯೂ ಮಾಂಸಾಹಾರ ನೀಡುವುದು) , 4) ಆರಾಧನೆ ( ಕುಲದೇವಸ್ಥಾನವಿದ್ದರೂ,ಇಲ್ಲಿ ಆರಾಧಿಸದೆ ಬೇರೆ ದೇವರ ಆರಾಧನೆ) ಮತ್ತು 5) ಪೌರೋಹಿತ್ಯ (ನಮ್ಮ ಕುಲದೇವರಾದ ವೀರಭದ್ರ ದೇವರನ್ನ ನಾವೇ ಏಕೆ ಪೂಜಿಸಬಾರದು). 

ಈ 5 ವಿಷಯಗಳ ಕುರಿತಾದ ಚಿಂತನೆಗಾಗಿ 16 ದೇವಸ್ಥಾನಗಳ ಮುಖ್ಯಸ್ಥರ ನಾಲ್ಲು ಸಭೆಗಳನ್ನು ಕರೆದು ಚರ್ಚೆ ನಡೆಸಲಾಗಿತ್ತು.  ಸನ್ಮಾನ್ಯ ಅಂಬಾತನಯ ಮುದ್ರಾಡಿ ಯವರ ಸಹಕಾರದಿಂದ ನಾವು ಮುಂದುವರೆಯಲು ಸಾಧ್ಯವಾಯಿತು. ಮೇಲಿನ ಎಲ್ಲಾ ವಿಷಯಗಳ ಪೂರ್ಣ ಜ್ಞಾನ ದೊರೆಯ ಬೇಕಾದರೆ ನಮ್ಮ ಆಧಿಮೂಲ ಮತ್ತು ಆಧಿಗುರು ಯಾರೆಂದು ತಿಳಿದರೆ ಇವೆಲ್ಲ ವಿಷಯಗಳ ಗೊಂದಲ ನಿವಾರಿಸಬಹುದು.  ಅಷ್ಟಮಂಗಳ ಪ್ರಶ್ನೆಯಿಂದ  ಮೂಲಸ್ಥಾನವನ್ನು ಮೂಲಗುರು ಯಾರೆಂದು ತಿಳಿಯಬಹುದು ಎಂಬ ಸಲಹೆ ನೀಡಿದರು.

ಈ ಸಮಯದಲ್ಲಿ ನನ್ನ ಮೂರು ವರ್ಷದ ಅಧಿಕಾರವದಿ ಮುಗಿದು ಶ್ರೀಪುರಂದರ ಶೆಟ್ಟಿಗಾರ್ ರವರು ಅಧ್ಯಕ್ಷರಾದರು. ಅವರ ಮುಂದಾಳು ತನದಲ್ಲಿ ಅಷ್ಟಮಂಗಳ ಪ್ರಶ್ನೆ ಏರ್ಪಡಿಸಲಾಯ್ತು.

ಪ್ರಶ್ನೆ:- ಅಷ್ಟಮಂಗಲ ಪ್ರಶ್ನೆಯಲ್ಲಿ ಏನು ಉತ್ತರ ದೊರೆಯಿತು?

ಪದ್ಮಶಾಲೀ ಸಮಾಜದವರು ಸುಮಾರು ಐದು ಶತಮಾನಗಳ ಹಿಂದೆ ಬಾರ್ಕೂರ ಪ್ರದೇಶಕ್ಕೆ ಬಂದವರಾಗಿದ್ದಾರೆ. ಇಲ್ಲಿ ಬ್ರಾಹ್ಮಣಾಶ್ರಯ ಹಾಗೂ ರಾಜಾಶ್ರಯದಲ್ಲಿದ್ದ ಲಕ್ಷಣವಿದೆ. ಇದಕ್ಕೆ ಮೊದಲಾಗಿ ಆಂದ್ರದ ಕೃಷ್ಣಾನದೀ ತಟದ ಅಮರಾವತೀ ಎಂಬ ಪ್ರದೇಶದಲ್ಲಿ ಮೂಲವಾಗಿದ್ದ ಈ ಸಮಾಜದವರು ಸಮಾರು 1400 ವರ್ಷಗಳ ಕಾಲದಲ್ಲಿ ಅಲ್ಲಿಂದ ಹೊರಟು ತಮಿಳುನಾಡಿನ ಕಂಚಿಯಲ್ಲಿ ಬಂದು ನೆಲೆಸಿದರು. ಅಲ್ಲಿ ಕಾಮಾಕ್ಷಿಯ ಆರಾಧನೆ ಹಾಗೂ ಗುರುಗಳ ಆಶ್ರಯದಲ್ಲಿದ್ದ ಲಕ್ಷಣವಿದೆ. ಅಲ್ಲಿ ಕಾಮಾಕ್ಷಿ ದೇವಾಲಯದ ಪರಿಸರದಲ್ಲಿ ಈ ಸಮಾಜ ದವರಿಗೇ (ಕುಲದೇವರಾಗಿ ಆರಾಧಿಸಿದ ) ಸೇರಿದ ಇನ್ನೊಂದು ಕಾಳಿ ಪ್ರಧಾನವಾದ ಕ್ಷೇತ್ರವಿದೆ. ಅದನ್ನು ತಿಳಿದು ಅನುಸ್ಮರಿಸಬೇಕು. ಕಾಮಾಕ್ಷಿಗೆ ವಸ್ತ್ರ ಸಮರ್ಪಿಸುತ್ತಿದ್ದ ಲಕ್ಷಣವಿದೆ. ಅಮರಾವತಿಯಲ್ಲಿ ಈಶ್ವರ ಪ್ರಧಾನ ದೇವಾಲಯ ಹಾಗೂ ದೇವಿ ಸಾನಿಧ್ಯಗಳನ್ನು ಆರಾಧಿಸುತ್ತಿದ್ದ ಲಕ್ಷಣವಿದೆ. ಇದನ್ನು ಕುಲದೇವರಾಗಿ ನಂಬಿದ ಲಕ್ಷಣವಿದೆ. ಶೈವ ವಿಭಾಗದವರಾಗಿದ್ದಾರೆ. ಪದ್ಮಶಾಲಿಗಳ ಆ ವಿಭಾಗಕ್ಕೆ ಒಂದು ಋಷಿ ಹಾಗೂ ಆ ಋಷಿಯ ಎರಡು ಪತ್ನಿಯರ ಕಥೆಯಿದೆ. ಯಜ್ಞ ನಡೆಸಿದ್ದರಿಂದ ವೃದ್ಧಿಯಾದ ಪರಂಪರೆಯಾಗಿದೆ. ಮಾರ್ಕಾಂಡೇಯರ ಸಂಬಂದವಿದೆ. ಈಗಲೂ ಈ ಸಮಾಜದವರು ಇದನ್ನು ಅನುಸ್ಮರಿಸಿ ಬರುವ ಲಕ್ಷಣವಿದೆ. ಕಾಂಚಿಯ ಬಳಿಕ ಮಧುರೆಗೆ ವಲಸೆ ಹೊದ ಈ ಸಮಾಜ ವಿಭಾಗದವರು ಅಲ್ಲಿಂದ ಎರಡು ಎರಡು ಪಂಗಡವಾಗಿ ಒಂದು ಕೇರಳಕ್ಕೂ ಇನ್ನೊಂದು ಕರ್ನಾಟಕಕ್ಕೂ ಬಂದ ಲಕ್ಷಣವಿದೆ. ಹಾಗೆ ಬಂದು ಬಾರ್ಕೂರಿನಲ್ಲಿ ನೆಲೆಸಿದ್ದಾಗಿದೆ. 

ಈ ವಿಷಯಗಳ ಜತೆ ಇನ್ನೂ ಹಲವು ವಿಚಾರಗಳ ಕುರಿತು ಸ್ಪಷ್ಟತೆ ದೊರಕಿತು.

ಪ್ರಶ್ನೆ:- ನಿಮ್ಮ ಪ್ರಶ್ನೆಗಳಿಗೆ ಉತ್ತರ ದೊರೆತ ನಂತರ, ಮತ್ತೇನು, ಮಾಡಿದಿರಿ?

ಅಷ್ಟಮಂಗಳ ಪ್ರಶ್ನೆ ಮುಗಿದ ಮೇಲೆ , ಈ ಪ್ರಶ್ನೆ ಆಧಾರದಲ್ಲಿ ಕಂಚಿಯಲ್ಲಿಯ ನಮ್ಮ ಮೂಲ ಕುಲದೇವರ ಹುಡುಕಾಟದಲ್ಲಿ ತೊಡಗಿದೆವು. ಕಂಚಿ ಮಠದ ಪೋನ್ ನಂ. ಹುಡುಕಿ ಸಂಪರ್ಕ ಬೆಳೆಸಿದೆವು ಸಾಧ್ಯವಾಗಲಿಲ್ಲ. ಬೇರೆ ಮೂಲದ ಹುಡುಕಾಟವೂ ಯಶಸ್ವಿಯಾಗಲಿಲ್ಲ.

ಪ್ರಶ್ನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು ,ಈಗಲೂ ನಿಮ್ಮವರು ಕಂಚಿಯಲ್ಲಿ ಕುಲದೇವರಾಗಿ ದೇವಿಯ ಆರಾಧನೆ ಮಾಡುತ್ತಿದ್ದಾರೆ, ಹೋಗಿ ಹುಡುಕಿದರೆ ಸಿಗುತ್ತದೆ ಎಂದು!  ನಮ್ಮ16 ಕುಲ ದೇವಸ್ಥಾನಗಳ ,ಅನೇಕ ದೇವಸ್ಥಾನಗಳ ಪ್ರಶ್ನೆಯಲ್ಲಿ ಕಾಂಚಿಪುರ ನಿಮ್ಮ ಮೂಲ ಎಂಬ ಬಗ್ಗೆ ತಿಳಿಸಲಾಗಿದೆ. ಆದರೆ ಅವರ್ಯಾರಿಗೂ ಕಂಚಿಯಲ್ಲಿ ಯಾವ ದೇವರು ನಿಮ್ಮ ಕುಲದೇವರು ಎಂದು ತಿಳಿಸದ ಕಾರಣ , ಕಂಚಿಗೆ ಹೋಗಿ ಕಾಮಾಕ್ಷಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದಾರೆ! ಆದರೆ ನಮ್ಮೀ ಪ್ರಶ್ನೆಯಲ್ಲಿಯೂ ಅದೇ ರೀತಿ ತಿಳಿಸುವ ಜೊತೆಗೆ " ಕಾಮಾಕ್ಷಿ ದೇವಿ ನಿಮ್ಮ ಕುಲದೇವರಲ್ಲ. ಅಲ್ಲಿಯೇ ಇರುವ , ಕಾಳಿಯೋ ,ದುರ್ಗೆಯೋ, ಮಹಮ್ಮಾಯಿಯೋ ದೇವಿ ನಿಮ್ಮ ಕುಲದೇವರು ಹೋಗಿ ಹುಡುಕಿದರೆ ಸಿಗುತ್ತದೆ" ಎಂದು ಹೇಳಲಾಗಿತ್ತು.

ಹಾಗಾಗಿ, ನಾವು ಕಂಚಿಗೆ ಹೋಗಿ ಹುಡಿಕಿಕೊಂಡು ಬರಲು 9 ಜನರ ತಂಡ ಸಿದ್ಧರಾದೆವು. ಸರ್ವಶ್ರೀ, ಪುರಂದ ಶೆಟ್ಟಿಗಾರ್, ನಾನು, ಮಂಗಳೂರು ಮತ್ತು ಮಣಿಪಾಲದ ಜಯರಾಮ್, ನೀಲಯ್ಯ ಶೆಟ್ಟಿಗಾರ್ ಉಡುಪಿ, ಸುರೇಂದ್ರ ಶೆಟ್ಟಿ(ಶೆಟ್ಟಿಗಾರ್) ಮಂಗಳೂರು, ಪಿತಾಂಬರಶೆಟ್ಟಿಗಾರ್ ಕಲ್ಲಾಪು ಮತ್ತು ಕಿನ್ನಿಗೋಳಿಯ ತಮಿಳು ತಿಳಿದ ಜಗಧೀಶ್ ಮತ್ತು ವಿಠಲ್ ಶೆಟ್ಟಿಗಾರ್ .

ಪ್ರಶ್ನೆ:- ಕಂಚಿಗೆ ಹೇಗೆ ಹೋದಿರಿ, ಅಲ್ಲಿ ಏನು ಪ್ರಯತ್ನ ಮಾಡಿದಿರಿ?

ಮೂಲ ಸ್ಥಾನದ ದೇವಸ್ಥಾನವಾದ ಬಾರಕೂರಲ್ಲಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿ , ಮಂಗಳೂರಿಂದ ರಾತ್ರಿ ರೈಲಲ್ಲಿ ಪ್ರಯಾಣಿಸಿ, ಕೊನೆಯ ಕೆಲವು ಮೈಲು ಬಸ್ನಲ್ಲಿ ತೆರಳಿ ಕಂಚಿಯನ್ನು , ಮಧ್ಯಾಹ್ಣ 1ಘಂ.ಗೆ ತಲುಪಿದೆವು. ಬಸ್ ಇಳಿದ ತಕ್ಷಣ ಕೆಲವು ರಿಕ್ಷಾದವರು ನಮ್ಮನ್ನು ಮುತ್ತಿಕೊಂಡು ತಮ್ಮ ರಿಕ್ಷಾ ಬಳಸುವಂತೆ ವಿನಂತಿಸಿಕೊಂಡರು. ನಮ್ಮ ತಮಿಳರು ಅವರಲ್ಲೊಬ್ಬನಲ್ಲಿ "ನಾವು ಪದ್ಮಶಾಲಿಗರು , ನಮ್ಮ ಮೂಲಕುಲದೇವಸ್ಥಾನ ಹುಡುಕಲು ಕರ್ನಾಟಕದಿಂದ ಬಂದಿದ್ದೇವೆ ", ಎಂದಾಗ ಆತ ತಾನೂ ಪದ್ಮಶಾಲಿ, ಬನ್ನಿ ನಮ್ಮವರದೇ ಲಾಡ್ಜ್ ಇದೆ ಅಲ್ಲಿ ವಿಚಾರಿಸಿರಿ ಎಂದಾಗ , ಮೂರು ರಿಕ್ಷಾ ಮಾಡಿಕೊಂಡು ಲಾಡ್ಜ್ ಗೆ ಹೋದೆವು ,ಎರಡು ರೂಂ ತೆಗೆದುಕೊಂಡು ಸ್ನಾನಾದಿ ಪೂರೈಸಲು ಕೆಲವರು ತೊಡಗಿದರೆ, ಕೆಲವರು ನಮ್ಮ ಸಮಾಜದ ಸಂಘಟನೆ ಇದೆಯೇ ಇದ್ದರೆ ಅದರ ಕಛೇರಿ ಎಲ್ಲಿದೆ ಎಂಬ ಬಗ್ಗೆ ತಿಳಿಯಲು ಪ್ರಯತ್ನದಲ್ಲಿ ತೊಡಗಿದೆವು. ಹೋಟೆಲ್ ಗೆ ಅರ್ಧ ಕಿ. ಮೀ. ದೂರದಲ್ಲೆ ಸಂಘದ ಕಛೇರಿ ಇದೆ ಎನ್ನುವುದೂ ಹಾಗೂ ಪೋನ್ ನಂ. ಪಡೆಯುವಲ್ಲೂ ಯಶಸ್ವಿಯಾದೆವು. 

        ಸಂಘದ ಅಧ್ಯಕ್ಷರನ್ನು ಸಂಪರ್ಕಿಸಿದಾಗ 3 ಘಂಟೆ ಸಮಯ, ಸಂಜೆ 6 ಘಂಟೆಗೆ ಬರುವಂತೆ ನಮ್ಮನ್ನು ಆಹ್ವಾನಿಸಿದರು. ಸಮಯಕ್ಕೆ ಸರಿಯಾಗಿ ಹೋದೆವು. ಸಂಘದ ಅಧ್ಯಕ್ಷ ಶ್ರೀ ಡಾ:ಸುಮತಿ ಅಯ್ಯ ಕಾರ್ಯದರ್ಶಿ ಮತ್ತು ಖಜಾಂಚಿ ಇದ್ದು, ನಮ್ಮನ್ನು ಸ್ವಾಗತಿಸಿದರು. ಅಲ್ಲಿಯ ಪದ್ಮಶಾಲಿಗರು ವ್ಯಾಪಾರಿ ಉದ್ಧೇಶದಿಂದ ಕನ್ನಡವನ್ನೂ ಕಲಿತಿದ್ದು, ನಮಗೆ ವ್ಯವಹರಿಸಲು ಅನಕೂಲವಾಯ್ತು. 

ಪ್ರಶ್ನೆ: ಕಂಚಿಯಲ್ಲಿ ತಮ್ಮ ಅರಿವಿಗೆ ಬಂದ ವಿಷಯಗಳೇನು?

 ನಾವು ಪ್ರಶ್ನಾವಳಿಯೊಂದನ್ನೇ ತಯಾರಿಸಕೊಂಡು ಹೋಗಿದ್ದೆವು. ಮೊದಲಾಗಿ ನೀವು ಯಾವ ದೇವರನ್ನು ಕುಲದೇವರಾಗಿ ಆರಾಧಿಸುತ್ತೀರಿ, ಹಾಗೂ ನಿಮ್ಮ ಗುರು ಯಾರು? ಪ್ರಶ್ನೆಗೆ," ನಾವು ಯಾವುದೇ ದೇವರನ್ನೂ ಕುಲದೇವರೆಂದು ಆರಾಧಿಸುವುದಿಲ್ಲ. ಇಲ್ಲಿ 5 ಪ್ರಮುಖ ದೇವಸ್ಥಾನಗಳಿವೆ. ಅವುಗಳ ಧ್ವಜಾರೋಹಣ ಸಮಯದಲ್ಲಿ ನಮ್ಮ ಸಮಾಜಕ್ಕೆ ಪ್ರಸಾದ ನೀಡುವ ಕ್ರಮವಿದೆ. ಆಗ ಹೋಗಿ ಪ್ರಸಾದ ಮಾತ್ರ ಪಡೆಯುತ್ತೇವೆ. ಇನ್ನು ಗುರುವಿನ ವಿಷಯದಲ್ಲೂ ಅಷ್ಟೇ, ಲಕ್ಷ-ಲಕ್ಷ ಹಣ ನೀಡಿದರೆ ಮಠದಲ್ಲಿ ಗೌರವವಿದೆ. ಹಾಗಾಗಿ ಗುರುವಿನ ಆರಾಧನೆಯೂ ನಮ್ಮಲ್ಲಿ ಇಲ್ಲ".

ನಮ್ಮಲ್ಲಿ ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದ ವಿಷಯವನ್ನು ತಿಳಿಸಿ, ಈಗಲೂ ಕುಲದೇವರ ಆರಾಧನೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ ಎಂಬ ವಿಷಯವನ್ನು ತಿಳಿಸಿದೆವು. 

ಆಗ ಅಧ್ಯಕ್ಷರು, 

ಪದ್ಮಶಾಲಿ ಕುಟುಂಬಗಳು 101 ಮನೆತನಗಳಿಂದ ಕೂಡಿತ್ತು . ಈ ಕುಟುಂಬಗಳು ರೇಷ್ಮ ಸೀರೆ ನೇಕಾರಿಕೆ ಮತ್ತು ಅದರ ವ್ಯಾಪಾರ ಮಾಡುತ್ತಿದ್ದು , ಬಹುತೇಕ ಕುಟುಂಬಗಳು ಶ್ರೀಮಂತವಾಗಿದ್ದವು. ಇವರು ಯಾವುದೇ ದೇವರನ್ನು ಕುಲದೇವರೆಂದು ಆರಾಧಿಸುತ್ತಿರಲಿಲ್ಲ . ಹೀಗಿರುವಾಗ ಒಮ್ಮೆ 'ಘೋರ ' ಮನೆತನದ ಎರಡು ಕುಟುಂಬಗಳಿಗೆ ಅತಿಯಾದ ಸಂಕಟವುಂಟಾಯಿತು. ಆಗ ಆ ಕುಟುಂಬಗಳು ಆ ಊರಿನ ಗ್ರಾಮದೇವತೆ ( ಮಾರಿಯಮ್ಮ) 'ಕಾಳಿ' ಎಂದು ಕರೆಯಲ್ಪಡುತ್ತಿದ್ದ , ಮಹಿಷಾಸುರ ಮರ್ಧಿನಿ ಚರಿತ್ರೆಯನ್ನು ಹೊಂದಿದ ದೇವಿಯಲ್ಲಿ ಮೊರೆ ಹೋಗುತ್ತಾರೆ. ಭಕ್ತ ರಕ್ಷಕಿ ಕಾಳಿಯಿಂದ ಅವರ ಸಂಕಷ್ಟಗಳು ನಿವಾರಣೆಯಾಗುತ್ತದೆ. ಹೀಗಾಗಿ ಆ ಎರಡು ಕುಟುಂಬಗಳು   ಆ ಕಾಳಿದೇವಿಯನ್ನು ಕುಲದೇವರಾಗಿ ಆರಾಧಿಸಲಾರಂಬಿಸಿದರು. ಕಾಲಾನಂತರದಲ್ಲಿ ಈ ಎರಡು ಕುಟುಂಬಗಳು ಹಲವು ಕುಟುಂಬಗಳಾಗಿ ಬೆಳಿಯಿತು. 

ಆ ಕುಟುಂಬದ ತಲೆಮಾರಿನವರು ಪ್ರತಿವರ್ಷ ಆಷಾಡ ಮಾಸದ 2 ನೇ ಭಾನುವಾರ ಇಲ್ಲಿ ಸೇರಿ ದೇವರ ಆರಾಧನೆ ಮಾಡುತ್ತಾರೆ. ನಮ್ಮನ್ನೂ ಕರೆಯುತ್ತಾರೆ ನಾವು ಹೋಗಿ ಪ್ರಸಾದ ಪಡೆಯುತ್ತೇವೆ ಎಂದರು. ಆ ಕುಟುಂಬದ ತಲೆಮಾರಿನವರು, ಈಗ ಕಂಚಿ,ಚನ್ನೈ ಮತ್ತು ಬೆಂಗಳೂರಿನಲ್ಲಿದ್ದಾರೆಂದು ತಿಳಿಸಿದರು.

ಈ ಸಮೂಹದಿಂದ ಕೆಲವು ಕುಟುಂಬಗಳು ಮದುರೈಗೆ ಹೋಗಿ ಅಲ್ಲಿ ಕೆಲವು ಕಾಲ ತಂಗಿದ್ದು, ಅವರೇ ಈಗ್ಗೆ ಸುಮಾರು 500 ವರ್ಷಗಳ ಹಿಂದೆ ಬಾರಕೂರಿಗೆ ಬಂದವರಾಗಿದ್ದಾರೆ

( ಬ್ರಿಟಿಷರ ಕಾಲದಲ್ಲಿ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡವು ತಮಿಳು ಪ್ರದೇಶಗಳೊಂದಿಗೆ ಸೇರಿಕೊಂಡಿತ್ತು. ಈ ಪ್ರದೇಶದಲ್ಲಿ ಸೌರಮಾನ ಪದ್ಧತಿ ಆಚರಣೆ ಇದ್ದು ಈಗಲೂ ಕರ್ನಾಟಕದ ಎಲ್ಲ ಕಡೆ ಚಾಂದ್ರಮಾನ ಬಳಕೆಯಲ್ಲಿದ್ದರೆ, ಕರಾವಳಿಯ ಅನೇಕ ಜಾತಿಯವರು ಸೌರಮಾನ ವನ್ನೇ ಆಚರಿಸುತ್ತಾರೆ. ಹಾಗಾಗಿ ಚಾಂದ್ರಮಾನ ಆಷಾಡವು ಆರಂಭವಾಗಿ 15 ದಿನವಾದ ಮೇಲೆ ಸೌರಮಾನ ಆಷಾಡ ಪ್ರಾರಂಭವಾಗುತ್ತದೆ.)

ಗೋತ್ರ ಪದ್ಧತಿಯ ಬಗ್ಗೆ ನಮ್ಮ ಪ್ರಶ್ನೆಗೆ:- ನಮ್ಮಲ್ಲಿ ಗೋತ್ರ ಪದ್ಧತಿಯ ಆಚರಣೆಯಿಲ್ಲ.  ಮನೆತನದ ಆಚರಣೆ ಇದೆ ನಮ್ಮಲ್ಲಿ 101 ಮನೆ ತನಗಳಿವೆ.ಅದನ್ನೇ  ಬಳಸುತ್ತೇವೆ .  

ವಿವಾಹದ ಕ್ರಮದ ಕುರಿತು ವಿಚಾರಿಸಿದಾಗ:- ನಮ್ಮಲ್ಲಿ "ಶೆಟ್ಟಿಗಾರ್ " ಮನೆಗಳಿವೆ. ಅವರೇ ವಿವಾಹ ಕಾರ್ಯವನ್ನೂ, ಪೂಜೆ ಮೊದಲಾದ ಧಾರ್ಮಿಕ ಕಾರ್ಯಗಳನ್ನೂ ನಡೆಸಿಕೊಡುತ್ತಾರೆ ಎಂದರು. ಶೆಟ್ಟಿಗಾರ್ ಎಂದರೇನರ್ಥವೆಂಬ ನಮ್ಮ ಪ್ರಶ್ನೆಗೆ, " ಧಾರ್ಮಿಕ ಅಧ್ಯಕ್ಷ /ಮುಖ್ಯಸ್ಥ" ಎಂಬ ಅರ್ಥವೆಂದು ತಿಳಿಸಿದರು. ಕರಾವಳಿಯಲ್ಲಿಯ ಗುರಿಕಾರರು ಮತ್ತು ಆಡಳಿತ ಮೊಕ್ತೇಸರ ಪದಗಳಿಗೆಪರ್ಯಾಯ ಅರ್ಥದ ಪದ. ಇಲ್ಲಿ ಮುಂದಾಳತ್ವ ಮಾತ್ರವಹಿಸಿದರೆ, ಅಲ್ಲಿ ಬ್ರಾಹ್ಮಣರು ನಿರ್ವಹಿಸುವ ಎಲ್ಲಾ ಕಾರ್ಯವನ್ನೂ ಕೆಲವು ಶೆಟ್ಟಿಗಾರರು ನಿರ್ವಹಿಸುತ್ತಾರೆ. ಅದಕ್ಕೆ  ತಕ್ಕ ಶಿಕ್ಷಣವನ್ನೂ ಪಡೆದಿರುತ್ತಾರೆ.

ಕಾಂಚಿಪುರದಲ್ಲಿ ಸುಮಾರು 4,000 ಪದ್ಮಶಾಲಿಗಳಿದ್ದಾರೆ. ಅವರ ಮಾತೃ ಭಾಷೆ ತೆಲುಗು. ಮರುದಿನ ಬೆಳಿಗ್ಗೆ ಲಾಡ್ಜ್ ನಿಂದ ಒಂದೂವರೆ ಕಿ. ಮೀ. ದೂರದಲ್ಲಿಯ ದೇವಾಲಯಕ್ಕೆ ಹೋದೆವು. ದೇವಾಲಯದ ದ್ವಾರ ಮುಚ್ಚಿತ್ತು. ವಿಶಾಲವಾದ ಸ್ಥಳವಿದ್ದು ಸುತ್ತ ಗೋಡೆ ಕಟ್ಟಲಾಗಿದೆ. ದಕ್ಷಿಣ ದಿಕ್ಕಿಗೆ ರಸ್ತೆಯಿದ್ದು, ಎತ್ತರವಾದ ಗೋಪುರವಿದೆ. ಈ ಗೋಪುರವನ್ನು ವಿಮಾನವೆಂದು ಕರೆಯಲಾಗುತ್ತದೆ. ಸಂಜೆ 5 ಘಂಟೆಗೆ ಗುಡಿ ತೆರೆಯಲಾಗುತ್ತದೆ ಆಗ ಬನ್ನಿ ಎಂದು ತಿಳಿಸಿದರು. ಆ ಕಾರಣದಿಂದ ಕಾಮಾಕ್ಷಿ ದೇವಸ್ಥಾನಕ್ಕೆ ಬೇಟಿಕೊಟ್ಟು ಪೂಜೆ ಮಾಡಿಸಿಕೊಂಡು, ಸಂಜೆ ಕುಲದೇವಸ್ಥಾನಕ್ಕೆ ಹೋದೆವು.

ದೇವಾಲಯದ ಹೆಸರು "karukkinil amarnthaval amman koil  " ಎಂಬ ನಾಮ ಫಲಕವಿದೆ. koil ಎಂದರೆ ದೇವಾಲಯ. ಕಪ್ಪು ಮರದಡಿ ಕುಳಿತ ಅಮ್ಮನ ದೇವಾಲಯ ಎಂದು ಕನ್ನಡದ ಅರ್ಥ. ಮಹಿಷಾಸುರ ಮರ್ಧಿನ ಕತೆಯನ್ನು ಹೊಂದಿದ ದೇವತೆ. " ಕರುಕ್ಕಿನಿಲ್" ಎಂದರೆ ಕಪ್ಪು ಮರ. ಕರಾವಳಿಯ "ಇರೋಲ್" ಮರ. ಮಹಿಷಾಸುರನನ್ನು ಕೊಂದ ದೇವಿಯು ಈ ಮರದ ಬುಡದಲ್ಲಿ ಕುಳಿತು ಗೋಚರಿಸಿಕೊಂಡ ಕಾರಣ ಆ ಹೆಸರು ಬಂದಿದೆ ಎನ್ನಲಾಗಿದೆ. ಈ ದೇವಾಲಯವು ಕಾಂಚಿಪುರಂ ನ ಗ್ರಾಮ ದೇವತೆ ಅರ್ಥಾತ್ ಮಾರಿಯಮ್ಮ. ಬೆಣಚು ಕಲ್ಲಿನ ವಿಗ್ರಹವು, ತ್ರಶೂಲದಿಂದ ರಾಕ್ಷಸ ವಧೆಯನ್ನು ಮಾಡುವ ಬಂಗಿಯಲ್ಲಿದೆ.  ಬಹಳ ಬಲಿಷ್ಟವಾದ ದೇವರು ಎಂಬ ನಂಬಿಕೆ ಅಲ್ಲಿಯವರದ್ದು. ಮೊದಲಿಯಾರ್ ಕುಟುಂಬ ಅರ್ಚಕರಾಗಿದ್ದಾರೆ. 

ದೇವತೆಗೆ ರಕ್ತಾಹಾರ ಕೊಡಲಾಗುತ್ತಿತ್ತಂತೆ. ತಮಿಳುನಾಡು ಸರ್ಕಾರವು ರಕ್ತಾಹಾರ ನಿಷೇಧಸಿದ ಮೇಲೆ ಅಲ್ಲಿಯೂ ರಕ್ತಾಹಾರವಿಲ್ಲ. ಪೌಳಿ ಇಲ್ಲದ ದೇವಾಲಯವು ಚಿಕ್ಕದಾಗಿದ್ದು ಹೆಚ್ಚೆಂದರೆ 20-30 ಜನ ಒಳಗೆ ನಿಲ್ಲಬಹುದಾಗಿದೆ. ಗುಡಿಯ ಎದುರಿಗೆ ಸಮಾರು 50 ಅಡಿ ದೂರದಲ್ಲಿ ಒಂದು ಕಟ್ಟೆಯಿದ್ದು , ಅಲ್ಲಿ ದೇವಾಲಯಕ್ಕೆ ಮುಖ ಮಾಡಿದ ಎರಡು ಬುದ್ಧನ ವಿಗ್ರಹಗಳಿವೆ.  ಈ ಬುದ್ಧರು ರೌದ್ರ ರೂಪಿಯಾದ ದೇವಿಯನ್ನು ಶಾಂತಗೊಳಿಸಿದ ಕಾರಣ ಅಲ್ಲಿ ಸ್ಥಾಪಿಸಲಾಗಿದೆ. ಈ ವಿಗ್ರಹ ವೀಕ್ಷಣೆಗೆ ಶ್ರೀಲಂಕ ಮೊದಲಾದ ಕಡೆಯಿಂದ ಬೌದ್ಧ ಬಿಕ್ಷುಗಳು ಬರುತ್ತಾರಂತೆ. ಅದರ ದಕ್ಷಿಣಕ್ಕೆ ಮಣಿಮೇಗಳ್ ಹೆಸರಿನ ವಿಗ್ರಹವಿದೆ. ಸುತ್ತಲೂ ಬೇರೆ ಬೇರೆ ವಿಗ್ರಹಗಳಿವೆ. ಅದರಲ್ಲಿ ಕೆಲವು ನಾಗನ ವಿಗ್ರಹವಾದರೆ, ಕೆಲವು ಬೇರೆ. ಮೂಲ ದೇವಿಗೆ ಪೊಂಗಲ್ ನ್ನು, ಆರಾಧನೆಗೆ ಬಂದ ಭಕ್ತರು ಅಲ್ಲಿಯೇ ತಯಾರಿಸಿ ನೈವೇಧ್ಯ ಮಾಡಿಸುತ್ತಾರೆ.  ದೇವಸ್ಥಾನದ ಹೆಸರಲ್ಲಿ youtube ನಲ್ಲಿ ಹುಡುಕಿದರೆ ಬೇರೆ ಬೇರೆ ವೀಡಿಯೋಗಳಿವೆ. ನೋಡಿ ಹೆಚ್ಚಿನ ವಿಷಯ ತಿಳಿಯಬಹುದು.

ಮೂಲ ಕುಲದೇವಸ್ಥಾನದ ಶೋಧನೆ ಮಾಡಿದ ನಂತರ ಗುರುವಿನ ಬಗ್ಗೆ ಅಲ್ಲಿಯವರು ನಡೆದುಕೊಳ್ಳದೇ ಇರುವ ಕಾರಣ ಶಂಕರಾಚಾರ್ಯ ಮಠಕ್ಕೆ ಹೋಗುವುದು ಸರಿಯಲ್ಲವೆಂದು ಹೋಗಲಿಲ್ಲ.

ಪ್ರಶ್ನೆಯ ಬಹು ಮುಖ್ಯ ಕೆಲಸ ಸುಲಭವಾಗಿ ನೆರವೇರಿದ ಬಗ್ಗೆ ಉಲ್ಲಾಸದಿಂದ ಹಿಂದುರುಗಿದೆವು. ಮಾತ್ರವಲ್ಲ "ಶೆಟ್ಟಿಗಾರ್" ಪದದ ಬಗ್ಗೆ ಈ ಹಿಂದೆ ಸಮಾಜದಲ್ಲಿ ಚಿಂತನೆಗಳು ನಡೆದಿದ್ದರೂ ಸರಿಯಾಗಿ ತಿಳಿದಿರಲಿಲ್ಲ. ಆ ಬಗ್ಗೆ ಬಹಳ ತೃಪ್ತಿ ಮತ್ತು ಸಂತೋಷವಿದೆ. ಬೆಂಗಳೂರಲ್ಲಿರುವ ಕಂಚಿ ಮೂಲದ ವರಲ್ಲಿ ಶ್ರೀವೆಂಕಟೇಶ್ ಎನ್ನುವವರು ಬೆಂಗಳೂರಿನ ಶಾಂತಿನಗರ  ಪ್ರದೇಶದಲ್ಲಿದ್ದಾರೆ. ಶ್ರೀಯುತರು ವಯೋವೃದ್ಧರು. ಅವರ ಮಗ ಲಕ್ಷ್ಮಿನಾರಾಯಣ ಹಾಗೂ ಇವರ ಸಹೋದರಿ ಲಕ್ಷ್ಮಿ ಎನ್ನುವವರು ಕಂಚಿಗೆ ಮದುವೆಯಾಗಿದ್ದು ಇವರಿಂದ ಅಗತ್ಯ  ಮಾಹಿತಿ ಪಡೆಯ ಬಹುದಾಗಿದೆ. 

ಪ್ರಶ್ನೆಯಲ್ಲಿ ತಿಳಿಸಲಾದ ಉಳಿದ ವಿಷಗಳ ಬಗ್ಗೆ ಚಿಂತಿಸುತ್ತಾ ಊರಿಗೆ ಮರಳಿದೆವು. 


ಪ್ರಶ್ನೆ: ಬಾರ್ಕೂರಿನಲ್ಲಿ ಪದ್ಮಶಾಲಿಗಳು ನೆಲೆ ನಿಂತ ಬಗ್ಗೆ ವಿವರ ನೀಡಿ

ಕರಾವಳಿ ಪದ್ಮಶಾಲಿಗರ ಮೂಲ ಸ್ಥಾನ ಶೋಧನೆ ಕುರಿತು ಬಾರಕೂರಲ್ಲಿ 2014 ರಲ್ಲಿ ನಡೆಸಿದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಚಿಯಿಂದ ಬಂದ ಪದ್ಮಶಾಲಿಗರಿಗೆ ನೀಡಿದ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಗುಡಿಯ ಸಮೀಪವೇ "ದೇವಿ" ಗುಡಿ ನಿರ್ಮಿಸಿದ ಮಾಹಿತಿ ತಿಳಿಯಿತು.

ಬಾರಕೂರು ಸಾಮಂತರಾಜನ ರಾಜಧಾನಿ. ರಾಜ ವೀರಮರ್ಮ ಬಲ್ಲಾಳ. ಆ ಕಾಲವು (14ನೇ ಶತಮಾನ) ಕರಾವಳಿಯ ಧಾರ್ಮಿಕ ಉನ್ನತಿಯ ಕಾಲ. ರಾಜಧಾನಿಯಲ್ಲಿ 365 ದೇವಾಲಯಗಳು. ದಿನಕ್ಕೊಂದು ದೇವಾಲಯದಲ್ಲಿ ರಾಜನ ಹೆಸರಲ್ಲಿ ಸೇವೆ. ರಾಜ ಭಕ್ತಿಯಿಂದ ಆ ಸೇವೆಯಲ್ಲಿ ಭಾಗವಹಿಸುತ್ತಿದ್ದು , ತನ್ನ ರಾಜ್ಯದ  ಉನ್ನತಿಗೆ ಮತ್ತು ಪ್ರಜೆಗಳ ಕ್ಷೇಮಕ್ಕೆ, ಸದಾ ದೇವರ ಆಶೀರ್ವಾದ ಅಗತ್ಯವೆಂದರಿತು , ದೇವತಾ ಆರಾಧನೆ ಮಾಡುತ್ತಿದ್ದವನು .

ವಿಶಿಷ್ಟವಾದ ಧಾರ್ಮಿಕ ತಳಹದಿಯ ಆಡಳಿತ. 365 ದೇವಾಲಯಗಳ ಸುಗಮ ವ್ಯವಸ್ಥೆಗೆ, ಆ ದೇವಾಲಯಗಳಲ್ಲಿ ಕೆಲವನ್ನು ತನ್ನ ರಾಜ್ಯದ ಒಂದೊಂದು ಕುಲಕ್ಕೆ" ಕುಲದೇವರಾಗಿ", ಒಪ್ಪಿಸುವ ವ್ಯವಸ್ಥೆ. ಆ ದೇವಳಗಳಿಗೆ ಸುಧೀರ್ಘ ವೂ , ಸುಗಮವೂ ಆದ ಆಡಳಿತ ವ್ಯವಸ್ಥೆಗೆ ಆದಾಯ ತರುವ ಭೂದಾನ.! ಅರ್ಥಾತ್ ಉಂಬಳಿ

ಈ 365 ದೇವಳದ ಅರ್ಚಕರಿಗೆ ಮಡಿ ಬಟ್ಟೆ ಒದಗಿಸುವ ವ್ಯವಸ್ಥೆಯಲ್ಲೊಮ್ಮೆ ಅನಾನುಕೂಲ! ಈ ವಸ್ತ್ರಗಳ ಆಯಾತ ತಮಿಳುನಾಡಿಂದ. ಆಯಾತಕ್ಕೇನೊ ಅಡಚಣೆ. ಈ ಅಡಚಣೆಯನ್ನು ಶಾಶ್ವತವಾಗಿ ನಿವಾರಿಸಲು, ನೇಕಾರ ಕುಟಂಬ ಗಳನ್ನೇ ಆಯಾತ ಮಾಡಿಕೊಂಡು ಶಾಶ್ವತ ಪರಿಹಾರ ಕಂಡುಕೊಂಡದ್ದು, ರಾಜನ ಪರಿಪೂರ್ಣ, ದೂರದರ್ಶಿತ್ವದ ಆಡಳಿತಕ್ಕೊಂದು ಉತ್ತಮ ಉದಾಹರಣೆ.!

ಬಾರಕೂರು ಸಂಸ್ಥಾನದಲ್ಲಿ ಪ್ರತಿಯೊಂದು ಜಾತಿಗೂ ಉಪನಾಮ. ಆ ಹೆಸರಿಂದಲೇ ಜಾತಿಯ ಪರಿಚಯ. ಕರಾವಳಿಯಲ್ಲಿ ಸಾಮಾನ್ಯವಾಗಿ ಉಪನಾಮವಿಲ್ಲದ ಜಾತಿಯೇ ಇಲ್ಲ. ಕೆಲವೊಂದು ಜಾತಿಗೆ ಹಲವಾರು ಉಪನಾಮಗಳು. ಉದಾ: ಬಂಟ ಜಾತಿಗೆ ಹತ್ತಾರು ಉಪನಾಮಗಳು, ಶೆಟ್ಟಿ, ರೈ, ಅಜಿಲ , ಹಗಡೆ, ನಾಯಕ್, ಇತ್ಯಾದಿ ಬ್ರಾಹ್ಮಣರಲ್ಲಿ ಭಟ್ಟ, ಅಡಿಗ , ರಾವ್, ಆಚಾರ್ಯ, ಐತಾಳ, ಸೋಮಯಾಜಿ ಮಯ್ಯ, ಇತ್ಯಾದಿ . 

ಕರಾವಳಿಗೆ ಆಗಮಿಸಿದ ಪದ್ಮಶಾಲಿಗರಿಗೆ ಯಾವುದೇ ಉಪನಾಮ ವಿರಲಿಲ್ಲ. ಇಲ್ಲಿಯ ಪದ್ದತಿಗೆ ಹೊಂದಿಕೊಳ್ಳಬೇಕಾಗಿ ಬಂದಾಗ ತಮ್ಮ ಪೂರ್ವಜರು ,ಕಂಚಿಯಲ್ಲಿ ತನ್ನದೇ ಜಾತಿಯ ವಿವಾಹದ ಪೌರೋಹಿತ್ಯ/ಮೇಲ್ವಿಚಾರಣೆ ಕಾರ್ಯವನ್ನು ನಿರ್ವಹಿಸುತ್ತಿದ್ದು , ಅಲ್ಲಿ ಅವರನ್ನು "ಶೆಟ್ಟಿಗಾರ್ " ಎಂದು ಕರೆಯುತ್ತಿದ್ದ ಕಾರಣ ಅದೇ ಕುಟುಂಬದಿಂದ ಬಂದವರಾದ್ದರಿಂದ ಆ ಹೆಸರನ್ನೇ ಉಪನಾಮವನ್ನಾಗಿ ಆಯ್ಕೆ ಮಾಡಿಕೊಂಡು ಬಳಸಲಾರಂಬಿಸಿದರು. ಹೀಗಾಗಿ ಕರಾವಳಿಗೆ ಬಂದ ಪದ್ಮಶಾಲಿಗರು   " ಶೆಟ್ಟಿಗಾರರಾದರು."  ಸಮಾಜದ ಜನಸಂಖ್ಯೆ ಬೆಳೆದಂತೆ ಕರಾವಳಿಯ ಉದ್ದಗಲಕ್ಕೂ ವಿಸ್ತರಿಸಿದರು. ವಿಟ್ಲ ಪ್ರದೇಶಕ್ಕೆ ವಿಸ್ತರಿಸಿದ ಪದ್ಮಶಾಲಿಗರಲ್ಲಿ ಕೆಲವರು "ಶೆಟ್ಟಿ" ಪದವನ್ನೂ ಉಪನಾಮವಾಗಿ ಬಳಸಿದರು. ಹಾಗಾಗಿ ಕರಾವಳಿ ಪದ್ಮಶಾಲಿಗರಲ್ಲಿ ಶೆಟ್ಟಿಗಾರ್ ಮತ್ತು ಶೆಟ್ಟಿ ಎಂಬ ಎರಡು ಉಪನಾಮಗಳಿವೆ.


ರಾಜ ತಾನು ಆರಾಧಿಸುತ್ತಿದ್ದ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವನ್ನು ಬಾರಕೂರಿಗೆ ಆಗಮಿಸಿದ ಪದ್ಮಶಾಲಿಗರಿಗೆ ನೀಡುತ್ತಾನೆ. ಬಾರಕೂರಲ್ಲಿ ಕುಲದೇವಸ್ಥಾವನ್ನು ಹೊಂದಿದ ಪದ್ಮಶಾಲಿಗರಿಗೆ ರಾಜಧಾನಿಯಿಂದ ಹೊರಭಾಗದಲ್ಲಿ ಕಾಲಿ ಇದ್ದ ವಿಶಾಲ ಪ್ರದೇಶವನ್ನು ವಾಸ್ತವ್ಯಕ್ಕಾಗಿ ನೀಡುತ್ತಾನೆ.

ಪದ್ಮಶಾಲಿಗರು ನೆಲೆಸಿದ ಆ ಪ್ರದೇಶವೇ, "ಪದ್ಮಶಾಲಿಕೇರಿ" ಇಂದಿನ ಸಾಲಿಕೇರಿ.ದೇವಸ್ಥಾನದ ಆಡಳಿತದ ಮುಖ್ಯಸ್ಥರು ಹಾಗೂ ಒಂದೆರಡು ಪರಿಚಾರಕ ಕುಟುಂಬ ಬಾರಕೂರಿನ ದೇವಸ್ಥಾನದ ಸಮೀಪವೇ ನೆಲೆಸಿದರು. ಅದುವೇ ಪಟಸಾಲಕೇರಿ. ಇದು ಬಾರಕೂರಿನ ಹತ್ತು ಕೇರಿಗಳಲ್ಲೊಂದು. ಹತ್ತೂ ಕೇರಿಗಳಲ್ಲಿ ನಾಲ್ಕಾರು ದೇವಾಲಯಗಳು, ಅದರಲ್ಲೊಂದಕ್ಕೆ ಪ್ರಧಾನ ದೇವರ ಪಟ್ಟ. ಹಾಗೇ ಪಟಸಾಲಕೇರಿಗೆ, ಪದ್ಮಶಾಲಿಗರಿಗೆ ನೀಡಿದ " ಶ್ರೀ ಬ್ರಹ್ಮಲಿಂಗೇಶ್ವರ " ನೇ ಪ್ರಧಾನ ದೇವರು. ಕಾಲಾನುಕ್ರಮದಲ್ಲಿ ಬ್ರಹ್ಮಲಿಂಗೇಶ್ವರನ ಪೀಠದಲ್ಲಿ ವಿರೇಶ್ವರನನ್ನು ಪ್ರತಿಷ್ಟಾಪಿಸಿದ ಕಾರಣ " ಬ್ರಹ್ಮಲಿಂಗವೀರಭದ್ರ " ನೆಂದು ಪುನಃ ನಾಮಕರಣವಾಗುತ್ತದೆ.  

ಪ್ರಶ್ನೆ:- ಕೂಡುಕಟ್ಟು ಮತ್ತು ದೇವಸ್ಥಾನಗಳ ಬಗ್ಗೆ ವಿವರ ನೀಡಿ

ಬಾರಕೂರಿಂದ ಕಾಞಂಗಾಡು ವರೆಗೆ ಹದಿನಾರು ದೇವಸ್ಥಾನಗಳನ್ನು ಹೊಂದಿದ್ದು. ಪ್ರತಿಯೊಂದು ದೇವಸ್ಥಾನವನ್ನು ಒಂದೊಂದು ಕೂಡುಕಟ್ಟು ಎಂದು ಕರೆಯುತ್ತಾರೆ. ಇಲ್ಲಿ ಪ್ರತಿಯೊಬ್ಬ ಪದ್ಮಶಾಲಿಗಳು ಈ ಕೂಡುಕಟ್ಟು ಸೇರಿರುತ್ತಾರೆ. ವಾರ್ಷಿಕ ವಂತಿಗೆಯನ್ನು ಸಲ್ಲಿಸುತ್ತಾರೆ. ದೇವಸ್ಥಾನಕ್ಕೆ ಸಂಬಂಧಿಸಿದಂತೆ ಪದ್ಮಶಾಲಿಗಳು ವಾಸಿಸುವ ಪ್ರತಿ ಪ್ರದೇಶಗಳಲ್ಲಿ  ದೇವಸ್ಥಾನದ ಗುರಿಕ್ಕಾರರು/ಮಾಗಣೆ ಮುಖ್ಯಸ್ಥರು/ ಮೊಕ್ತೇಸರರು ಇರುತ್ತಾರೆ. ಅವರು ದೇವಸ್ಥಾನ ವಿಧಿ ವಿಧಾನ ಮಾತ್ರವಲ್ಲದೆ,ದೇವಸ್ಥಾನಕ್ಕೆ ಸಂಬಂಧಿಸಿದ ಪ್ರತಿ ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಲ್ಲಿ ಅಥವಾ ಅಶುಭ ಸಮಾರಂಭದಲ್ಲಿ ಆ ಕೂಡುಕಟ್ಟು ದೇವಸ್ಥಾನದ ಗುರಿಕ್ಕಾರರು /ಮಾಗಣೆ ಮುಖ್ಯಸ್ಥರು /ಮೊಕ್ತೇಸರರು/ಹಿರಿಯರು ಕಡ್ಡಾಯ ಉಪಸ್ಥಿತರಿದ್ದು ಪದ್ಮಶಾಲಿಗಳ ಸಮಾಜದ್ದೇ ಆದ ವಿಧಿವಿಧಾನಗಳನ್ನು  ನಡೆಸಿಕೊಡುತ್ತಾರೆ.ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ದೇವಸ್ಥಾನಕ್ಕೆ ಬಂದು ಕಾಣಿಕೆ ಸಲ್ಲಿಸಿ ಪ್ರಾರ್ಥನೆ ಮಾಡುವ ಪದ್ಧತಿ ಇದೆ.


*ತುಳುನಾಡಿನ ಪದ್ಮಶಾಲಿಗಳ ಹದಿನಾರು ದೇವಸ್ಥಾನಗಳು*

ಉಡುಪಿಯ ಜಿಲ್ಲೆಯ ದೇವಸ್ಥಾನಗಳು

ಬ್ರಹ್ಮಲಿಂಗ ವೀರಭಧ್ರ ದುರ್ಗಾಪರಮೇಶ್ವರಿ ದೇವಸ್ಥಾನ ಬಾರಕೂರು 

ಬ್ರಹ್ಮಲಿಂಗ ವೀರಭಧ್ರ ದುರ್ಗಾಪರಮೇಶ್ವರಿ ಸಾಲಿಕೇರಿ 

ಆದಿಶಕ್ತಿ ವೀರಭಧ್ರ ಬ್ರಹ್ಮಲಿಂಗ ದೇವಸ್ಥಾನ ಕಲ್ಯಾಣಪುರ

ಆದಿಶಕ್ತಿ ವೀರಭಧ್ರ ದೇವಸ್ಥಾನ ಕಾರ್ಕಳ

ಆದಿಶಕ್ತಿ ವೀರಭಧ್ರ ದೇವಸ್ಥಾನ ಎರ್ಮಾಳು

ಆದಿಶಕ್ತಿ ವೀರಭಧ್ರ ದೇವಸ್ಥಾನ ಕಾಪು

ಮಹಾಗಣಪತಿ ವೀರಭಧ್ರ ಶಾಂತದುರ್ಗಾ ದೇವಸ್ಥಾನ ಕಿನ್ನಿಮುಲ್ಕಿ

ವೀರಭಧ್ರ ದೇವಸ್ಥಾನ ಪಡುಬಿದ್ರಿ


ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳು

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಬೋಳೂರು ಮಂಗಳೂರು 

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಕಲ್ಲಾಪು ಹಳೆಯಂಗಡಿ 

ವೀರಭಧ್ರ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಹಳೆ ಮಾರಿಯಮ್ಮ ದೇವಸ್ಥಾನ ಸುರತ್ಕಲ್

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಮಾನಂಪಾಡಿ ಮುಲ್ಕಿ

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಸಿದ್ದಕಟ್ಟೆ ಸಂಗಬೆಟ್ಟು* 

ವೀರಭಧ್ರ ದುರ್ಗಾಪರಮೇಶ್ವರಿ ದೇವಸ್ಥಾನ ಉಳ್ಳಾಲ


ಕಾಸರಗೋಡು ಜಿಲ್ಲೆಯ ದೇವಸ್ಥಾನಗಳು

ವೀರಭದ್ರ ಮಹಾಮ್ಮಾಯಿ ದೇವಸ್ಥಾನ ಬಂಗ್ರ ಮಂಜೇಶ್ವರ 

ವೀರಭಧ್ರ ಮಹಾಮ್ಮಾಯಿ ದೇವಸ್ಥಾನ ಹೊಸದುರ್ಗ ಕಾಂಞಗಾಂಡು


ಇವಲ್ಲದೆ ಉಳಿದ ದೇವಸ್ಥಾನಗಳು

ಆದಿಶಕ್ತಿ ದುರ್ಗಾದೇವಿ ಮಹಾಮ್ಮಾಯಿ ದೇವಸ್ಥಾನ ಮಿಜಾರು ದಡ್ಡಿ

ಆದಿಶಕ್ತಿ ದುರ್ಗಾದೇವಿ ಮಹಾಮ್ಮಾಯಿ ದೇವಸ್ಥಾನ ಪಯ್ಯರಬೆಟ್ಟು