Wednesday, March 27, 2024

ಪದ್ಮಶಾಲಿ ಸಮಾಜದ ಬಹುಮುಖ ಪ್ರತಿಭೆ ಶ್ರೀ ಮಲ್ಲಯ್ಯ ಜಿ ಗುರುಬಸಪ್ಪನಮಠ ರೋಣ



 ದುಬೈನಲ್ಲಿ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಜಂಟಿಯಾಗಿ International Awards ಕಾರ್ಯಕ್ರಮ ಹಮ್ಮಿಕೊಂಡಿದ್ದು ನಮ್ಮ ಪದ್ಮಶಾಲಿ ಸಮಾಜದ ಬಹುಮುಖ ಪ್ರತಿಭೆ ಶ್ರೀ ಮಲ್ಲಯ್ಯ ಜಿ ಗುರುಬಸಪ್ಪನಮಠ ಅವರ ಸಾಧನೆಯನ್ನು ಗುರುತಿಸಿ "Dubai India International Award-2024"  ಅನ್ನು ನೀಡುತಿದ್ದಾರೆ

    ಗದಗ ಜಿಲ್ಲೆಯ ರೋಣ ಪಟ್ಟಣದ   ಶ್ರೀ ಮಲ್ಲಯ್ಯ ಜಿ ಗುರುಬಸಪ್ಪನಮಠ ಅವರದು ಬಹುಮುಖ ಪ್ರತಿಭೆ. ಇವರು, ಕೃಷಿಕರು ಹೌದು ಹಾಗೂ ರೋಣದ ಪುರಸಭೆ ಸದಸ್ಯರು ಕೂಡ ಹೌದು. ಅವರಲ್ಲಿನ ಧಾರ್ಮಿಕ, ಸಾಂಪ್ರದಾಯಿಕ ಪದ್ಧತಿ ಹಾಗೂ ನಿಸರ್ಗದ ಬಗೆಗಿನ ಜ್ಞಾನ ಹಾಗೂ ಸಂಗ್ರಹಿಸಿದ ವಸ್ತುಗಳು ಮತ್ತು ಮಾದರಿಗಳು ನಿಜಕ್ಕೂ ಎಂಥಹವರನ್ನೂ ಅಚ್ಚರಿಗೊಳಿಸುತ್ತಿದೆ.


    ಹಳೇಕೃಷಿ ಪದ್ಧತಿ ನೆನಪಿಸುವಂತಹ ನಮ್ಮ ಪಾರಂಪರಿಕ ಕೃಷಿ ಸಲಕರಣೆ, ಮನೆ ಬಳಕೆ ಸಾಮಗ್ರಿಗಳ ಮಾದರಿಗಳನ್ನು ಸಿದ್ದಪಡಿಸಿಕೊಂಡು, ವಿವಿಧ ಕೃಷಿಮೇಳಗಳಲ್ಲಿ ಪ್ರದರ್ಶನ ನೀಡುತ್ತ ಅದರ ಬಗ್ಗೆ ಹಲವಾರು ಮಾಹಿತಿಗಳನ್ನು ಜನರಿಗೆ ನೀಡುತ್ತ ಬಂದಿದ್ದಾರೆ.

    ಪೂರ್ವಜನರ ಲಿಪಿ ಹೇಗೆ ಆರಂಭಗೊಂಡಿತು. ನವೀಲು ಗರಿಯಲ್ಲಿ ಋುಷಿಮುನಿಗಳು ಹೇಗೆ ಬರೆಯುತ್ತಿದ್ದರು, 500-600 ವರ್ಷಗಳ ಹಿಂದಿನ ತಾಳೆ ಗರಿಯ ಲಿಪಿ ಹೇಗೆ ಇತ್ತು. ನವೀಲು ಗರಿ ನಂತರ ಗಲಗ (ಮಸಿಯಲ್ಲಿ ಅದ್ದಿ ಬರೆಯುವುದು) ಹೇಗಿತ್ತು,  ಹಿಂದಿನ ಕಾಲದಲ್ಲಿ ಕಳ್ಳಕಾಕರಿಂದ ತಮ್ಮ ಆಸ್ತಿಪತ್ರ, ಆಭರಣ, ಹಣವನ್ನು ಇಟ್ಟುಕೊಳ್ಳಲು ಗ್ರಂಥ ಮಾದರಿಯ ಆಭರಣ ಪೆಟ್ಟಿಗೆ (ಗುಪ್ತಿ) ಹೇಗೆ ಇತ್ತು ಹೀಗೆ ಹಲವಾರು ವಿಷಯಗಳ ಮಾದರಿಗಳನ್ನ ಸಿದ್ದ ಪಡಿಸಿ ಜನರಿಗೆ ಅರಿವು ನೀಡುತ್ತ ಬಂದಿದ್ದಾರೆ.

ಕೃಷಿಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಮಾತ್ರ ಜಾಗೃತಿ ಮೂಡಿಸುತ್ತಿಲ್ಲ ಮಲ್ಲಯ್ಯ, ನಮ್ಮ ಪೂರ್ವಜನರ ಜೀವನ ಶೈಲಿ, ಆಚಾರ- ವಿಚಾರ, ಸಂಸ್ಕೃತಿ ಹಾಗೂ ಧಾರ್ಮಿಕ ನಂಬಿಕೆ- ಅಪನಂಬಿಕೆಗಳ ಬಗ್ಗೆ, ರುದ್ರಾಕ್ಷಿ, ಸಾಲಿಗ್ರಾಮ ಹಾಗೂ ಗಂಟೆಯ ನಾದದ ಬಗ್ಗೆಯೇ ತಿಳಿವಳಿಕೆ ನೀಡುತ್ತಿದ್ದಾರೆ. ಭೂಮಂಡಲದಲ್ಲಿ ಶಾಸ್ತ್ರೋಕ್ತವಾದ 21 ಬಗೆಯ ನಾನಾ ಮುಖಗಳ ರುದ್ರಾಕ್ಷಿಗಳಿವೆ. ಇದರಲ್ಲಿ 12ರವರೆಗೆ ಮುಖಗಳಿರುವ ರುದ್ರಾಕ್ಷಿಗಳನ್ನು ಮನುಷ್ಯ ಧರಿಸಬಹುದು, ಪೂಜಿಸಬಹುದು. ಮುಂದಿನದವು ರಾಕ್ಷಸರು ಧರಿಸಲು ಬಿಟ್ಟುಕೊಟ್ಟಿದ್ದಾರೆ ಹಿರಿಯರು. ಇವು ಹಿಮಾಲಯದಲ್ಲಿ ಮಾತ್ರ ಸಿಗಲಿದೆ. ಇನ್ನು ಯಾವುದೇ ವಿಗ್ರಹಕ್ಕೂ ಸಾಲಿಗ್ರಾಮದ ಸ್ಪರ್ಶವಿದ್ದಾಗ ಮಾತ್ರ ಅದು ಸಾರ್ಥಕ. ನಿಜವಾದ ಸಾಲಿಗ್ರಾಮದ ನೇಪಾಳದ ಗಂಡಿಕಿ ನದಿಯಲ್ಲಿ ಸಿಗಲಿದೆ. ಆದರೆ, ಇಂದು ಸಾಲಿಗ್ರಾಮ ಹಚ್ಚದ ಅಪವಿತ್ರ ಹಲವು ಮೂರ್ತಿಗಳು ತಯಾರಾಗುತ್ತಿವೆ. ಇನ್ನು ಗಂಟೆ ಓಂ ಕಾರ ನಾದ ಹುಟ್ಟಿಸಬೇಕು. ಈಗ ವ್ಯಾಪಾರಕ್ಕಾಗಿ ಸಾಧಾ ಗಂಟೆಗಳ ಮಾರಾಟವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. 

    ಸಾಂಪ್ರದಾಯಿಕ ಕೃಷಿ ಬಗ್ಗೆ ಪ್ರಚಾರ ನೀಡಲು, ಹಲವಾರು ಮಾದರಿಗಳನ್ನ ಸಿದ್ದಪಡಿಸಿಟ್ಟುಕೊಂಡಿದ್ದಾರೆ. ಈ ಹಿಂದೆ ಇದ್ದ ಕಟ್ಟಿಗೆಯ ಎತ್ತಿನ ಗಾಡಿ, ನೊಗ, ರೆಂಟೆ, ಕೂರಿಗೆ ತಾಳು, ಎಡೆಕೂಟೆ, ಒಕ್ಕಲಿಗನ ಹಂತಿ, ಜತೆಗೆ ಮೇವು ಕತ್ತರಿಸುವ ಇಳಿಗೆ ಮಾತ್ರವಲ್ಲ ಮನೆಯಲ್ಲಿ ಬಳಸುತ್ತಿದ್ದ ಬೀಸುಕಲ್ಲು, ಗಡಿಗೆ, ಎತ್ತಿನ ನಾಲು, ಕೋಡಂಚು, ಚಂಡಾಳಗೊಂಬೆ, ಒಳಕಲ್ಲು ಸೇರಿದಂತೆ ನೂರಾರು ಬಗೆಯ ಕೃಷಿ ಹಾಗೂ ಮನೆಬಳಕೆಯ ವಸ್ತುಗಳ ಮಾದರಿಯನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಜತೆಗೆ ಇಚ್ಛೆ ಪಟ್ಟವರಿಗೆ ಯಾವುದೇ ಲಾಭ ಇಲ್ಲದೇ ಇದರಲ್ಲಿನ ಎಲ್ಲ ವಸ್ತುಗಳನ್ನು ತಯಾರಿಸಿ ಕೊಡುವುದಾಗಿ ಹೇಳುತ್ತಿದ್ದಾರೆ. ಮಾತ್ರವಲ್ಲ ರಾಜಮಹಾರಾಜರು ಆರೋಪಿಗಳನ್ನು ದಂಡಿಸಲು ಬಳಸುತ್ತಿದ್ದ ಛಾಟಿ, ಕಡ್ಡಿ ಪೊಟ್ಟಣ ಇಲ್ಲದಿದ್ದಾಗ ಬಳಕೆಗೆ ಬಂದ ಚಕಮಗಿ ಮತ್ತಿತರರ ವಸ್ತುಗಳು ಇವರ ಸಂಗ್ರಹದಲ್ಲಿವೆ

    ನಾಣ್ಯ, ನೋಟುಗಳ ಸಂಗ್ರಹ:- ಮಲ್ಲಯ್ಯ ಅವರು ಮೆಹಂಜೋದಾರ, ಹರಪ್ಪ ನಾಗರಿಕತೆಯಿಂದ ಹಿಡಿದು ಇಲ್ಲಿಯವರೆಗಿನ ಸುಮಾರು 300 ಬಗೆಯ ನಾಣ್ಯಗಳನ್ನು ಸಂಗ್ರಹಿಸಿದ್ದಾರೆ.

    ಇವರು ಮಾಹಿತಿ ಕಣಜ ಎಂದೇ ಹೇಳಬೇಕು. ಅಪಾರ ಜ್ನಾನವನ್ನು ಸಂಪಾದಿಸಿರುವುದಲ್ಲದೆ, ಜನರಿಗೆ ಅರಿವು ಮೂಡಿಸುತ್ತ ತಮ್ಮ ಕಾಯಕದಲ್ಲಿ ಮಗ್ನರಾಗಿರುವ ಇವರಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದುಬೈ - ಇಂಡಿಯಾ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸುತಿದ್ದಾರೆ.



















ಮಾಹಿತಿ ಕೃಪೆ:- ಮಾರುತಿಶಿವಪ್ಪ ಗರಡಿಮನಿ ರಾಣೆಬೆನ್ನೂರು ಮತ್ತು ವಿಜಯಕರ್ನಾಟಕ, ಕನ್ನಡಪ್ರಭ  

ಮಾಹಿತಿ ಸಂಗ್ರಹ ಮತ್ತು ನಿರೂಪಣೆ
ಪಿ.ಎಸ್.ರಂಗನಾಥ ರಾಂಪುರ
ಮಸ್ಕತ್ - ಒಮಾನ್

Monday, March 25, 2024

ಶ್ರೀ ರಮೇಶ್ ಸಂಗಾ, ಪದ್ಮಶಾಲಿ ಸಮಾಜದ ಹೆಮ್ಮೆ.



ಸರ್ಕಾರದ ಉನ್ನತ ಹುದ್ದೆಗಳಲ್ಲಿ ಪದ್ಮಶಾಲಿ ಸಮಾಜದ ವ್ಯಕ್ತಿಗಳು ಬೆರಳೆಣಿಕೆಯಷ್ಟಿದ್ದಾರೆ. ಅವಕಾಶಗಳು ಮತ್ತು ಪ್ರತಿಭೆಯಿದ್ದರೂ ಸಹ IAS, KAS, IPS ನಂತಹ ಉನ್ನತ ಹುದ್ದೆ ಪಡೆಯಲು ಜನ ನಿರಾಸಕ್ತಿ ತೋರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ  ಕಂಡು ಬರುತ್ತಿದೆ. ಪದ್ಮಶಾಲಿ ಸಮಾಜದ ಶ್ರೀ ರಮೇಶ್ ಸಂಗಾ ರವರು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಈ ದಿನ ಜನರು ಗುರುತಿಸುವ ಮಟ್ಟಕ್ಕೆ ಬೆಳೆದಿದ್ದಲ್ಲದೆ ತಮಗೆ ದೊರೆತ ಯಾವುದೇ ಹುದ್ದೆಯನ್ನು ಸರಿಯಾಗಿ ನಿಭಾಯಿಸುತ್ತ ಅಲ್ಲಿ ಸಾಧನೆ ಮಾಡುತ್ತ, ತಮ್ಮ ಹೆಜ್ಜೆಗುರುತನ್ನ ಮೂಡಿಸುತ್ತ ಮುನ್ನೆಡೆದಿದ್ದಾರೆ. 
     ಶ್ರೀ ರಮೇಶ್ ಸಂಗಾ ರವರು ಪ್ರಸ್ತುತ ರಾಜ್ಯ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಮತ್ತು ಒಕ್ಕಲಿಗರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತಿದ್ದಾರೆ. ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ  ಜಿಲ್ಲಾ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಳೆದ ಹದಿನೈದಕ್ಕೂ ಹೆಚ್ಚಿನ ವರ್ಷಗಳಿಂದ ಸರಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು‌ ತಮ್ಮ ಸರಳ ಸಜ್ಜನಿಕೆಗೆ‌ಮತ್ತು ಎಲ್ಲರೊಂದಿಗೆ ಬೆರೆಯುವ ಇವರ ಸ್ವಭಾವಕ್ಕೆ ಬಹಳ ಹೆಸರುವಾಸಿ. ಮೂಲತಃ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನವರಾದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಗೊಂಡಿದ್ದು, ವಿಧಾನಸೌದ ದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ.

    ಜನ ಸಾಮಾನ್ಯರು, ತಮ್ಮ ಸಮಸ್ಯೆಯನ್ನು ಹೊತ್ತು ಇವರ ಬಳಿ ಬಂದಾಗ, ಸೂಕ್ತ ಪರಿಹಾರಕ್ಕಾಗಿ ಸಕಲ ಪ್ರಯತ್ನವನ್ನು ಮಾಡುವ ಇವರು ಜನಪರ ಅಧಿಕಾರಿಯಾಗಿ  ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ. ಶ್ರೀಯುತರು  ಪದ್ಮಶಾಲಿ ಸಮಾಜದ ಹೆಮ್ಮೆ ಎಂದು ಹೇಳುವುದಿಕ್ಕೆ ಬಹಳ ಸಂತೋಷವಾಗುತ್ತಿದೆ.

    ಈ ಹಿಂದೆ ಗುಲ್ಬರ್ಗದಲ್ಲಿ BCM ಆಫಿಸರ್ ಆಗಿದ್ದಾಗ, ಅಂದಿನ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಿದ ಇವರ ಕಾರ್ಯವೈಖರಿ ಬಹಳ ಜನರ ಮೆಚ್ಚುಗೆಗೆ  ಪಾತ್ರವಾಗಿತ್ತು. ಉನ್ನತ ಮಟ್ಟದ ಅಧಿಕಾರಿಯಾಗಿದ್ದರೂ ಸಹ, ನೊಂದವರ ನಡುವೆಯೆ ನಿಲ್ಲುವ ವ್ಯಕ್ತಿ ಎಂದು ಶ್ರೀ ರಮೇಶ್.ಜಿ.ಸಂಗಾರವರು ತಮ್ಮ ಜನಪರ ಕೆಲಸಗಳಿಂದ ಸಾಬೀತು ಪಡಿಸಿದ್ದಾರೆ. 

ಸರ್ಕಾರಿ ನೌಕರರಾಗಿ ಅತಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಪದ್ಮಶಾಲಿ ಸಮಾಜದವರು ಬಹಳ ಕಡಿಮೆ. ಹೀಗಾಗಿ, ಯುವಕರು ಸರ್ಕಾರಿ ಹುದ್ದೆ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಪಡಬೇಕು ಎಂದು ಅವರು ಆಶಿಸುತ್ತಾರೆ.



    ಯಾವುದೇ ಸಮಾಜವು  ಸರ್ವತೋಮುಖ ಅಭಿವೃದ್ದಿಯಾಗಬೇಕಾರೆ, ಬದಲಾವಣೆಯಾಗಬೇಕಾದರೆ,  ಸರ್ಕಾರಿ ವ್ಯವಸ್ಥೆಯೊಳಗೆ ಬರುವಂತಹ ಕೆಲಸ ಮಾಡಬೇಕು, ಆಗ ಮಾತ್ರ ಬದಲಾವಣೆ ಸಾಧ್ಯ. ಸರ್ಕಾರದ ಮುಖ್ಯ ಮೂರು ಸ್ಥಂಭಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ವ್ಯವಸ್ಥೆಯೊಳಗೆ ಬರುವ ಕೆಲಸ ಮಾಡಬೇಕು.  IAS KAS, ಅಥವ ಇತರೆ ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಇಲ್ಲವೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಅಥವ ನ್ಯಾಯಾಂಗದ ವ್ಯವಸ್ಥೆಯಲ್ಲಿ ನ್ಯಾಯವಾದಿ ಅಥವ ನ್ಯಾಯಾದೀಶರಾಗಿ ಕೆಲಸ ಮಾಡಿದರೆ ಮಾತ್ರ ಸಮಾಜವು ಬದಲಾವಣೆ ಕಾಣಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ.



    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ, ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಪದ್ಮಶಾಲಿ ಸಮಾಜದ ವಿದ್ಯಾರ್ಥಿಗಳು, ಯುವಕ ಯುವತಿಯರು, ಮಾಡಬೇಕಿದೆ ಹಾಗೂ ಪೋಷಕರು ಸಹ ಈ ಯೋಜನೆಗಳ ಫಲಾನುಭವಿಗಳಾಬೇಕು ಎನ್ನುತ್ತಾರೆ.

    ಪದ್ಮಶಾಲಿ ಸಮಾಜದ ಬಾಂಧವರು ಸರ್ಕಾರದ ಉನ್ನತ ಹುದ್ದೆಯಲ್ಲಿಯಿರುವುದು ಬಹಳ ವಿರಳ. ಈ ಹಿಂದೆ ಉನ್ನತ ಹುದ್ದೆ ನಿರ್ವಹಿಸಿದ ಬಹುತೇಕರು ಇಂದು ನಿವೃತ್ತಿಯಾಗಿದ್ದಾರೆ. ಇತ್ತೀಚಿನ ಯುವ ಜನತೆ ಸರ್ಕಾರಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ  ಹಿಂಜರಿಯುತ್ತಿರುವುದಕ್ಕೆ ಹಲವಾರು ಕಾರಣಗಳು ಇವೆ. ರಾಜಕೀಯ ಒತ್ತಡ, ಹಿರಿಯ ಅಧಿಕಾರಿಗಳ ಕಿರುಕುಳ, ಕಡಿಮೆ ಸಂಭಳ, ಹೀಗೆ ಇತ್ಯಾದಿ ಕಾರಣಗಳು. ವಿಶಾಲ ಮನೋಭಾವದಿಂದ ಯುವ ಜನತೆ ಆಲೋಚಿಸಿ ಸರ್ಕಾರದ ಮೂರು ಅಂಗಗಳಲ್ಲಿ ಬರುವ ಕೆಲಸವನ್ನು ಮಾಡಬೇಕಾಗಿದೆ.

  ಸರ್ಕಾರದಿಂದ ಏಕಾಏಕಿ ವರ್ಗಾವಣೆ ಆದೇಶ ಬಂದಾಗ ಕೆಎಟಿ ನ್ಯಾಯಾಧಿಕರಣ ಮೊರೆಹೋಗಿ ಗೆಲುವನ್ನು ದಕ್ಕಿಸಿಕೊಂಡಿದ್ದಾರೆ. ಸರ್ಕಾರಿ ಹುದ್ದೆಯಲ್ಲಿದ್ದಾಗ, ಆರೋಪಗಳು ಸಹಜ.  ದಿಟ್ಟತನದಿಂದ ಅವೆಲ್ಲವನ್ನು ಎದುರಿಸಿ ಸವಾಲುಗಳನ್ನು ಸ್ವೀಕರಿಸುವುದು ಇವರಿಗೆ ಅಭ್ಯಾಸವಾಗಿ ಹೋಗಿದೆ. ಏನೇ ಬಂದರೂ ಎದುರಿಸಿತ್ತೇನೆ ಎನ್ನುವ ಧೈರ್ಯ ಇವರಲ್ಲಿದೆ. 

    ಉತ್ತಮ ರೀತಿಯಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಿ ಪದ್ಮಶಾಲಿ ಸಮಾಜದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ಯುವ ಪ್ರಯತ್ನವನ್ನು ಶ್ರೀಯುತರು ಮಾಡುತ್ತಾರೆನ್ನುವ ಆಶಾವಾದ ಸಮಾಜದ ಬಾಂಧವರಲ್ಲಿದೆ. ಕುಲದೇವರುಗಳಾದ ಶ್ರೀ ಮಾರ್ಕಂಡೇಯ ಋಷಿಗಳು ಮತ್ತು ಶ್ರೀ ಭಾವನಾ ಮಹರ್ಷಿಗಳು ಇವರಿಗೆ ಇನ್ನೂ ಹೆಚ್ಚಿನ ಯಶಸ್ಸನ್ನು ಕೊಡಲಿ ಎಂದು ನಾವೆಲ್ಲರೂ ಹಾರೈಸೋಣ