Monday, March 25, 2024

ಶ್ರೀ ರಮೇಶ್ ಸಂಗಾ, ಪದ್ಮಶಾಲಿ ಸಮಾಜದ ಹೆಮ್ಮೆ.



ಸರ್ಕಾರದ ಉನ್ನತ ಹುದ್ದೆಗಳಲ್ಲಿ ಪದ್ಮಶಾಲಿ ಸಮಾಜದ ವ್ಯಕ್ತಿಗಳು ಬೆರಳೆಣಿಕೆಯಷ್ಟಿದ್ದಾರೆ. ಅವಕಾಶಗಳು ಮತ್ತು ಪ್ರತಿಭೆಯಿದ್ದರೂ ಸಹ IAS, KAS, IPS ನಂತಹ ಉನ್ನತ ಹುದ್ದೆ ಪಡೆಯಲು ಜನ ನಿರಾಸಕ್ತಿ ತೋರಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ  ಕಂಡು ಬರುತ್ತಿದೆ. ಪದ್ಮಶಾಲಿ ಸಮಾಜದ ಶ್ರೀ ರಮೇಶ್ ಸಂಗಾ ರವರು ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಈ ದಿನ ಜನರು ಗುರುತಿಸುವ ಮಟ್ಟಕ್ಕೆ ಬೆಳೆದಿದ್ದಲ್ಲದೆ ತಮಗೆ ದೊರೆತ ಯಾವುದೇ ಹುದ್ದೆಯನ್ನು ಸರಿಯಾಗಿ ನಿಭಾಯಿಸುತ್ತ ಅಲ್ಲಿ ಸಾಧನೆ ಮಾಡುತ್ತ, ತಮ್ಮ ಹೆಜ್ಜೆಗುರುತನ್ನ ಮೂಡಿಸುತ್ತ ಮುನ್ನೆಡೆದಿದ್ದಾರೆ. 
     ಶ್ರೀ ರಮೇಶ್ ಸಂಗಾ ರವರು ಪ್ರಸ್ತುತ ರಾಜ್ಯ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಮತ್ತು ಒಕ್ಕಲಿಗರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತಿದ್ದಾರೆ. ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ  ಜಿಲ್ಲಾ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕಳೆದ ಹದಿನೈದಕ್ಕೂ ಹೆಚ್ಚಿನ ವರ್ಷಗಳಿಂದ ಸರಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು‌ ತಮ್ಮ ಸರಳ ಸಜ್ಜನಿಕೆಗೆ‌ಮತ್ತು ಎಲ್ಲರೊಂದಿಗೆ ಬೆರೆಯುವ ಇವರ ಸ್ವಭಾವಕ್ಕೆ ಬಹಳ ಹೆಸರುವಾಸಿ. ಮೂಲತಃ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನವರಾದ ಇವರು ಸದ್ಯ ಬೆಂಗಳೂರಿನಲ್ಲಿ ನೆಲೆಗೊಂಡಿದ್ದು, ವಿಧಾನಸೌದ ದಲ್ಲಿ ಕಾರ್ಯ ನಿರ್ವಹಿಸುತಿದ್ದಾರೆ.

    ಜನ ಸಾಮಾನ್ಯರು, ತಮ್ಮ ಸಮಸ್ಯೆಯನ್ನು ಹೊತ್ತು ಇವರ ಬಳಿ ಬಂದಾಗ, ಸೂಕ್ತ ಪರಿಹಾರಕ್ಕಾಗಿ ಸಕಲ ಪ್ರಯತ್ನವನ್ನು ಮಾಡುವ ಇವರು ಜನಪರ ಅಧಿಕಾರಿಯಾಗಿ  ಉತ್ತಮ ಹೆಸರನ್ನು ಸಂಪಾದಿಸಿದ್ದಾರೆ. ಶ್ರೀಯುತರು  ಪದ್ಮಶಾಲಿ ಸಮಾಜದ ಹೆಮ್ಮೆ ಎಂದು ಹೇಳುವುದಿಕ್ಕೆ ಬಹಳ ಸಂತೋಷವಾಗುತ್ತಿದೆ.

    ಈ ಹಿಂದೆ ಗುಲ್ಬರ್ಗದಲ್ಲಿ BCM ಆಫಿಸರ್ ಆಗಿದ್ದಾಗ, ಅಂದಿನ ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಿದ ಇವರ ಕಾರ್ಯವೈಖರಿ ಬಹಳ ಜನರ ಮೆಚ್ಚುಗೆಗೆ  ಪಾತ್ರವಾಗಿತ್ತು. ಉನ್ನತ ಮಟ್ಟದ ಅಧಿಕಾರಿಯಾಗಿದ್ದರೂ ಸಹ, ನೊಂದವರ ನಡುವೆಯೆ ನಿಲ್ಲುವ ವ್ಯಕ್ತಿ ಎಂದು ಶ್ರೀ ರಮೇಶ್.ಜಿ.ಸಂಗಾರವರು ತಮ್ಮ ಜನಪರ ಕೆಲಸಗಳಿಂದ ಸಾಬೀತು ಪಡಿಸಿದ್ದಾರೆ. 

ಸರ್ಕಾರಿ ನೌಕರರಾಗಿ ಅತಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಪದ್ಮಶಾಲಿ ಸಮಾಜದವರು ಬಹಳ ಕಡಿಮೆ. ಹೀಗಾಗಿ, ಯುವಕರು ಸರ್ಕಾರಿ ಹುದ್ದೆ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಪಡಬೇಕು ಎಂದು ಅವರು ಆಶಿಸುತ್ತಾರೆ.



    ಯಾವುದೇ ಸಮಾಜವು  ಸರ್ವತೋಮುಖ ಅಭಿವೃದ್ದಿಯಾಗಬೇಕಾರೆ, ಬದಲಾವಣೆಯಾಗಬೇಕಾದರೆ,  ಸರ್ಕಾರಿ ವ್ಯವಸ್ಥೆಯೊಳಗೆ ಬರುವಂತಹ ಕೆಲಸ ಮಾಡಬೇಕು, ಆಗ ಮಾತ್ರ ಬದಲಾವಣೆ ಸಾಧ್ಯ. ಸರ್ಕಾರದ ಮುಖ್ಯ ಮೂರು ಸ್ಥಂಭಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ವ್ಯವಸ್ಥೆಯೊಳಗೆ ಬರುವ ಕೆಲಸ ಮಾಡಬೇಕು.  IAS KAS, ಅಥವ ಇತರೆ ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಇಲ್ಲವೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಅಥವ ನ್ಯಾಯಾಂಗದ ವ್ಯವಸ್ಥೆಯಲ್ಲಿ ನ್ಯಾಯವಾದಿ ಅಥವ ನ್ಯಾಯಾದೀಶರಾಗಿ ಕೆಲಸ ಮಾಡಿದರೆ ಮಾತ್ರ ಸಮಾಜವು ಬದಲಾವಣೆ ಕಾಣಲು ಸಾಧ್ಯ ಎನ್ನುವುದು ಅವರ ಅಭಿಪ್ರಾಯ.



    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ, ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಪದ್ಮಶಾಲಿ ಸಮಾಜದ ವಿದ್ಯಾರ್ಥಿಗಳು, ಯುವಕ ಯುವತಿಯರು, ಮಾಡಬೇಕಿದೆ ಹಾಗೂ ಪೋಷಕರು ಸಹ ಈ ಯೋಜನೆಗಳ ಫಲಾನುಭವಿಗಳಾಬೇಕು ಎನ್ನುತ್ತಾರೆ.

    ಪದ್ಮಶಾಲಿ ಸಮಾಜದ ಬಾಂಧವರು ಸರ್ಕಾರದ ಉನ್ನತ ಹುದ್ದೆಯಲ್ಲಿಯಿರುವುದು ಬಹಳ ವಿರಳ. ಈ ಹಿಂದೆ ಉನ್ನತ ಹುದ್ದೆ ನಿರ್ವಹಿಸಿದ ಬಹುತೇಕರು ಇಂದು ನಿವೃತ್ತಿಯಾಗಿದ್ದಾರೆ. ಇತ್ತೀಚಿನ ಯುವ ಜನತೆ ಸರ್ಕಾರಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ  ಹಿಂಜರಿಯುತ್ತಿರುವುದಕ್ಕೆ ಹಲವಾರು ಕಾರಣಗಳು ಇವೆ. ರಾಜಕೀಯ ಒತ್ತಡ, ಹಿರಿಯ ಅಧಿಕಾರಿಗಳ ಕಿರುಕುಳ, ಕಡಿಮೆ ಸಂಭಳ, ಹೀಗೆ ಇತ್ಯಾದಿ ಕಾರಣಗಳು. ವಿಶಾಲ ಮನೋಭಾವದಿಂದ ಯುವ ಜನತೆ ಆಲೋಚಿಸಿ ಸರ್ಕಾರದ ಮೂರು ಅಂಗಗಳಲ್ಲಿ ಬರುವ ಕೆಲಸವನ್ನು ಮಾಡಬೇಕಾಗಿದೆ.

  ಸರ್ಕಾರದಿಂದ ಏಕಾಏಕಿ ವರ್ಗಾವಣೆ ಆದೇಶ ಬಂದಾಗ ಕೆಎಟಿ ನ್ಯಾಯಾಧಿಕರಣ ಮೊರೆಹೋಗಿ ಗೆಲುವನ್ನು ದಕ್ಕಿಸಿಕೊಂಡಿದ್ದಾರೆ. ಸರ್ಕಾರಿ ಹುದ್ದೆಯಲ್ಲಿದ್ದಾಗ, ಆರೋಪಗಳು ಸಹಜ.  ದಿಟ್ಟತನದಿಂದ ಅವೆಲ್ಲವನ್ನು ಎದುರಿಸಿ ಸವಾಲುಗಳನ್ನು ಸ್ವೀಕರಿಸುವುದು ಇವರಿಗೆ ಅಭ್ಯಾಸವಾಗಿ ಹೋಗಿದೆ. ಏನೇ ಬಂದರೂ ಎದುರಿಸಿತ್ತೇನೆ ಎನ್ನುವ ಧೈರ್ಯ ಇವರಲ್ಲಿದೆ. 

    ಉತ್ತಮ ರೀತಿಯಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಿ ಪದ್ಮಶಾಲಿ ಸಮಾಜದ ಹೆಸರನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ಯುವ ಪ್ರಯತ್ನವನ್ನು ಶ್ರೀಯುತರು ಮಾಡುತ್ತಾರೆನ್ನುವ ಆಶಾವಾದ ಸಮಾಜದ ಬಾಂಧವರಲ್ಲಿದೆ. ಕುಲದೇವರುಗಳಾದ ಶ್ರೀ ಮಾರ್ಕಂಡೇಯ ಋಷಿಗಳು ಮತ್ತು ಶ್ರೀ ಭಾವನಾ ಮಹರ್ಷಿಗಳು ಇವರಿಗೆ ಇನ್ನೂ ಹೆಚ್ಚಿನ ಯಶಸ್ಸನ್ನು ಕೊಡಲಿ ಎಂದು ನಾವೆಲ್ಲರೂ ಹಾರೈಸೋಣ








No comments:

Post a Comment